ಸುಂಟಿಕೊಪ್ಪ: ಸಮೀಪದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಪೊನ್ನತ್ ಮೊಟ್ಟೆಯ ಆರ್.ಎಸ್. ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರು ದುರಸ್ತಿ ಕಾರ್ಯಕ್ಕೆ ₹7 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಜೂ4ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ 'ಕುಸಿಯುವ ಚಾವಣಿ, ಅಪಾಯದಲ್ಲಿ ಮಕ್ಕಳು' ಎಂಬ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಉಂಟಾಗುತ್ತಿರುವ ಸಂಕಷ್ಟವನ್ನು ಕಂಡು ಮರುಗಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಚೈತ್ರ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶೌಕತ್ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಈ ಶಾಲೆಯ ಶುಚಿತ್ವವನ್ನು ಕಾಪಾಡುವಂತೆ ಸೂಚಿಸಿದರಲ್ಲದೇ, ಶಾಲಾ ಕಟ್ಟಡದ ದುರಸ್ತಿಗೆ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದರು.
ಅದರಂತೆ, ಕಾಮಗಾರಿ ಆರಂಭಿಸಲು ಶಾಸಕರ ನಿರ್ದೇಶನದಂತೆ ಗುರುವಾರ ಪಂಚಾಯತ್ ರಾಜ್ ಮುಖ್ಯ ಎಂಜಿನಿಯರ್ ನಾರಾಯಣ ಮೂರ್ತಿ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಮಾಹಿತಿ ನೀಡಿದರು.
1963ರಲ್ಲಿ ಪ್ರಾರಂಭಗೊಂಡ ಈ ಸರ್ಕಾರಿ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದ ವಿದ್ಯಾಸಂಸ್ಥೆ ಶಿಥಿಲಾವಸ್ಥೆಗೆ ಒಳಗಾಗಿದ್ದು ಇದೀಗ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಶಾಸಕರ ಮುಖಾಂತರ ಕಾಯಕಲ್ಪಕ್ಕೆ ಒಳಗಾಗಿರುವುದು ಪ್ರಜ್ಞಾವಂತ ನಾಗರಿಕ ರಲ್ಲಿ ಸಂತಸ ವ್ಯಕ್ತವಾಗಿದೆ.
ಇದೇ ವೇಳೆ ಶಾಲಾ ಮುಖ್ಯೋಪಾಧ್ಯಾಯಿನಿ ಚೈತ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೌಕತ್, ವಲಯ ಕಾಂಗ್ರೆಸ್ ಅಧ್ಯಕ್ಷ ಟಿ.ಎಂ.ಮಹಮ್ಮದ್ ರಫಿ, ಸಹಾಯಕ ಎಂಜಿನಿಯರ್ ಸಲೀಂ, ಗ್ರಾಮ ಪಂಚಾಯಿತಿ ಸದಸ್ಯೆ ರಸೀನಾ, ಮಾಜಿ ಅಧ್ಯಕ್ಷೆ ಶಕೀನಾ, ಹಳೆಯ ವಿದ್ಯಾರ್ಥಿ ಅಬ್ಧುಲ್ ಸಕೀರ್, ಸಹಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.