ADVERTISEMENT

ಕುಶಾಲನಗರ | ವಿಜೃಂಭಣೆಯ ಹನುಮ ಜಯಂತಿ: ಗಮನ ಸೆಳೆದ ಉತ್ಸವ ಮಂಟಪಗಳ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 15:27 IST
Last Updated 5 ಡಿಸೆಂಬರ್ 2022, 15:27 IST
   

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಹನುಮ ಜಯಂತಿಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಡಿಕೇರಿಯ ರಾಮಮಂದಿರಗಳು, ಶನಿವಾರಸಂತೆ ಪಟ್ಟಣದ ಶ್ರೀರಾಮ ಮಂದಿರ ಸೇರಿದಂತೆ ಹಲವೆಡೆ ಪೂಜಾವಿಧಿಗಳು ನೆರವೇರಿದವು. ಕುಶಾಲನಗರದಲ್ಲಿ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆದ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾದರು.

ಆಂಜನೇಯ ದೇವಾಲಯ ಸೇವಾ ಸಮಿತಿ ಮತ್ತು ರಾಮಾಂಜನೇಯ ಉತ್ಸವ ಸಮಿತಿ ವತಿಯಿಂದ 37ನೇ ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ವಿವಿಧ ಉತ್ಸವ ಮಂಟಪಗಳ ಶೋಭಾಯಾತ್ರೆ ಜನಮನ ರಂಜಿಸಿತು. ಇಲ್ಲಿನ ರಥಬೀದಿಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾಕೈಂಕರ್ಯಗಳು ನೆರವೇರಿದವು.

ಆಂಜನೇಯ ವಿಗ್ರಹವನ್ನು, ವಿದ್ಯುತ್ ದೀಪಗಳ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಸೇರಿದ್ದರು. 7 ಉತ್ಸವ ಮಂಟಪಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವು.

ADVERTISEMENT

ಎಚ್.ಆರ್.ಪಿ.ಕಾಲೋನಿಯ ಶ್ರೀರಾಮ ಮಂದಿರದ ಆಂಜನಿಪುತ್ರ ಜಯಂತೋತ್ಸವ ಆಚರಣಾ ಸಮಿತಿ, ಮಾದಾಪಟ್ಟಣ ಶ್ರೀರಾಮದೂತ ಉತ್ಸವ ಸಮಿತಿ, ಗುಡ್ಡೆಹೊಸೂರಿನ ವೀರಾಂಜನೇಯ ಸೇವಾ ಸಮಿತಿ, ಗುಮ್ಮನಕೊಲ್ಲಿಯ ಬಸವೇಶ್ವರ ಸೇವಾ ಸಮಿತಿ, ಬೈಚನಹಳ್ಳಿಯ ಮಾರಿಯಾಮ್ಮ ದೇವಸ್ಥಾನ ಸಮಿತಿ, ಕಾಳಮ್ಮ ಕಾಲೋನಿಯ ಕಾಳಿಕಾಂಭ ದೇವಸ್ಥಾನ ಸಮಿತಿ, ಗೋಪಾಲ್ ಸರ್ಕಲ್‌ನ ಗಜಾನನ ಯುವಕ ಸಂಘದ ಉತ್ಸವ ಮಂಟಪಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.