ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್ನಲ್ಲಿ ಶುಕ್ರವಾರ ಮಚ್ಚಂಡ ಮತ್ತು ಮುಕ್ಕಾಟಿರ (ಕುಂಜಿಲಗೇರಿ) ತಂಡದ ಆಟಗಾರರು ಗೆಲುವಿಗಾಗಿ ಸೆಣಸಾಟ ನಡೆಸಿದರು
ಮಡಿಕೇರಿ: ಇಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಮುದ್ದಂಡ ಕಪ್ನಲ್ಲಿ ಹಲವು ಪಂದ್ಯಗಳು ಪ್ರೇಕ್ಷರನ್ನು ಕುತೂಹಲದ ತುತ್ತತುದಿಗೆ ಏರಿಸಿದವು.
ಶಿವಾಚಾಳಿಯಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ದಾಖಲಿಸಿದವು. ಟೈ ಬ್ರೇಕರ್ನಲ್ಲಿ ಚೆರಿಯಪಂಡ ತಂಡ 3 ಗೋಲು ದಾಖಲಿಸಿ ಗೆಲುವಿನ ನಗೆ ಬೀರಿತು.
ಇದೇ ಬಗೆಯಲ್ಲಿ ಮುಕ್ಕಾಟಿರ (ಕುಂಜಿಲಗೇರಿ) ಮತ್ತು ಮಚ್ಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 2 ಗೋಲು ದಾಖಲಿಸಿದವು. ಟೈ ಬ್ರೇಕರ್ ನಲ್ಲಿ ಮಚ್ಚಂಡ ತಂಡ 4 ಗೋಲು ಬಾರಿಸಿ ಗೆಲುವು ದಾಖಲಿಸಿತು. ಮುಕ್ಕಾಟಿರ ಸಹ 3 ಗೋಲು ಗಳಿಸಿ ತೀವ್ರ ಪೈಪೋಟಿ ನಡೆಸಿದ್ದು, ಪ್ರೇಕ್ಷಕರನ್ನು ತುದಿಗಾಲ ಮೇಲೇರಿಸಿತು.
ಪುಟಿನ್ ಅಯ್ಯಪ್ಪ 2, ಅಪ್ಪಚ್ಚು, ಭೀಮಯ್ಯ ಹಾಗೂ ಚಂಗಪ್ಪ ತಲಾ 1 ಗೋಲುಗಳ ನೆರವಿನಿಂದ ಪಾಲಂದಿರ 5-0 ಅಂತರದಿಂದ ಐನಂಡ ವಿರುದ್ಧ ಭಾರಿ ಗೆಲುವು ಪಡೆಯಿತು.
ಪ್ರತಾಪ್ ಅಚ್ಚಯ್ಯ ಹ್ಯಾಟ್ರೀಕ್ ಗೋಲಿನ ನೆರವಿನಿಂದ ಚೌರೀರ ಮುಕ್ಕಾಟಿರ (ಬೇತ್ರಿ) ತಂಡವನ್ನು 4-1 ಅಂತರದಿಂದ ಸೋಲಿಸಿತು.
ಬೋಪಣ್ಣ ಹಾಗೂ ಗಣಪತಿ ತಲಾ 1 ಗೋಲುಗಳು ಮೂಕಳಮಾಡ 2–0 ಅಂತರದಿಂದ ಅಜ್ಜಿಕುಟ್ಟೀರ ವಿರುದ್ಧ ಗೆಲುವು ಸಾಧಿಸಲು ಕಾರಣವಾಯಿತು.
ಬೋಪಣ್ಣ 3 ಹಾಗೂ ನೇತ್ರ ಸೋಮಯ್ಯ 2 ಗೋಲುಗಳು ತಾತಂಡ ಕುಯಿಮಂಡ ವಿರುದ್ಧ 5-0 ಅಂತರದ ಗೆಲುವಿಗೆ ಕಾರಣವಾದವು.
ಸಾಬ ತಿಮ್ಮಯ್ಯ ಅವರು 1 ಗೋಲು ಕಾಳೆಯಂಡದ 1–0 ಅಂತರದಿಂದ ಕೊಕ್ಕಲೆಮಾಡ ವಿರುದ್ಧ ಜಯಕ್ಕೆ ಕಾರಣವಾಯಿತು.
ಕಳ್ಳಿಚಂಡ ತಂಡವು ನಾಯಕಂಡ ವಿರುದ್ಧ 4–0 ಅಂತರದ ಭಾರಿ ಜಯದಲ್ಲಿ ಕಾವೇರಪ್ಪ 2, ಸವನ್ ಹಾಗೂ ಕುಶಾಲಪ್ಪ ತಲಾ 1 ಗೋಲುಗಳು ಪ್ರಮುಖ ಪಾತ್ರ ವಹಿಸಿದವು.
ಶಾಸತ್ ಮುತ್ತಪ್ಪ 2 ಹಾಗೂ ಆಯುಷ್ ಬೋಪಯ್ಯ 1 ಗೋಲುಗಳು ಕಾಳಿಮಾಡ 3-0 ಅಂತರದಿಂದ ನಂಬುಡುಮಾಡ ಎದುರು ಗೆಲುವುದಕ್ಕೆ ಕಾರಣವಾದರೆ, ವಿನು ಸೋಮಯ್ಯ 2, ಗೌತಮ್ ಗಣಪತಿ ಹಾಗೂ ಪ್ರೀತಮ್ ತಲಾ 1 ಗೋಲುಗಳು ತಿರುಟೆರ 4-0 ಅಂತರದಿಂದ ತಿರೋಡಿರ ಎದುರು ಗೆಲುವು ಸಾಧಿಸಲು ಸಾಧ್ಯವಾಯಿತು.
ಟೈಬ್ರೇಕರ್ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕಳಕಂಡ ಕೊಟ್ಟುಕತ್ತಿರ ಎದುರು ಗೆದ್ದಿತು.
ಉಳಿದಂತೆ, ಕೊಚ್ಚೆರ, ಕಳ್ಳಂಗಡ, ತೀತರಮಾಡ, ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತ ಪ್ರವೇಶಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.