ಕುಶಾಲನಗರ: ಪಟ್ಟಣದಲ್ಲಿ ಕೊಡಗು ಜಿಲ್ಲಾ ಸೀರ್ವಿ ಸಮಾಜ ಹಾಗೂ ರಾಜಸ್ಥಾನ ಮೂಲದವರು ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿರುವ ಶ್ರೀಮಾತಾ ದೇವಸ್ಥಾನದ ಸಮುದಾಯದ ಭವನದಲ್ಲಿ ಹೋಳಿ ಹಬ್ಬದ ಅಂಗವಾಗಿ ಸಮಾಜದವರು ಪರಸ್ಪರ ಬಣ್ಣ ಎರಚಿ, ಸಿಹಿ ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಣ್ಣದ ಹೋಳಿ ಆಚರಣೆ ಮುನ್ನ ದಿನ ರಾತ್ರಿ ‘ಹೋಳಿಕಾ ದಹನ’ ಕಾರ್ಯಕ್ರಮ ನಡೆಯಿತು. ಶುಕ್ರವಾರ ಬೆಳಗ್ಗೆ ಚಾಮುಂಡಿ ಪೂಜೆ, ಸಾಂಪ್ರದಾಯಿಕ ಡೂಂಡ್ ಆಚರಣೆ ಸೇರಿದಂತೆ ಭಜನೆ, ಪ್ರಾರ್ಥನೆ ನಡೆಯಿತು.
ಸಮುದಾಯವರು ಪರಸ್ಪರ ಬಣ್ಣ ಹಚ್ಚಿ, ಬಣ್ಣದ ನೀರಿನ ಓಕುಳಿ ಆಟವಾಡಿ ಹಬ್ಬದ ಶುಭಾಶಯ ಕೋರಿ ನೃತ್ಯ ಮಾಡಿ ಸಂಭ್ರಮಿಸಿದರು. ತಮ್ಮ ದೈನಂದಿನ ವಹಿವಾಟು ಬದಿಗೊತ್ತಿ ಸಾಮೂಹಿಕ ಸಹಭೋಜನ ಮೂಲಕ ಹೋಳಿ ಹಬ್ಬ ಆಚರಿಸಿದರು.
ಕೂಡಿಗೆ, ಹೆಬ್ಬಾಲೆ, ಮಂಜೂರು ಗ್ರಾಮದಲ್ಲಿ ಕೂಡ ರಾಜಸ್ಥಾನದವರು ಪರಸ್ಪರ ಬಣ್ಣ ಎರಚಿ, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು.
ಈ ಸಂದರ್ಭ ಸಮಾಜದ ಅಧ್ಯಕ್ಷ ಕಿಶನ್ ಲಾಲ್, ಪ್ರಮುಖರಾದ ಓಂಪ್ರಕಾಶ್, ದಿನೇಶ್, ರಾಜೇಶ್, ರಾಜುರಾಂ, ಖಾನಾರಾಂ, ಧರ್ಮಿಚಂದ್, ನೇಮಿಚಂದ್, ಮೋಹನ್ ಲಾಲ್, ಅನಿತಾ, ಕಂಚನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.