ಮಡಿಕೇರಿ: 2018ರ ಆಗಸ್ಟ್ನಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ನಿರಾಶ್ರಿತ ಕುಟುಂಬದವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಮಂಗಳವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಭೆ ನಡೆಯಿತು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರಾಶ್ರಿತರ ಅಭಿಪ್ರಾಯ ಪಡೆಯಲಾಯಿತು.
ಈಗಾಗಲೇ ಕರ್ಣಂಗೇರಿ ಮತ್ತು ಮದೆನಾಡು ಬಳಿಯ ಗೋಳಿಕಟ್ಟೆಯಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದಂತೆ ಗಾಳಿಬೀಡು, ಕೆ.ನಿಡುಗಣೆ, ಜಂಬೂರು ಮತ್ತು ಬಿಳಿಗೇರಿಯಲ್ಲಿ ಮನೆಗಳ ಹಂಚಿಕೆ ಮಾಡಬೇಕಿದೆ. ಯಾವ ಸ್ಥಳದಲ್ಲಿ ಮನೆ ಬೇಕು ಎಂಬ ಅಭಿಪ್ರಾಯವನ್ನು ಸಂತ್ರಸ್ತರಿಂದಲೇ ಪಡೆಯಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಟಿ.ಜವರೇಗೌಡ ತಿಳಿಸಿದರು.
ಮನೆ ಕಳೆದುಕೊಂಡ ಒಟ್ಟು 911 ಕುಟುಂಬಗಳಲ್ಲಿ 446 ಕುಟುಂಬಗಳ ಮನೆ ಸಂಪೂರ್ಣ ಹಾನಿಯಾಗಿದೆ. ಇವರಲ್ಲಿ 35 ಕುಟುಂಬಗಳಿಗೆ ಕರ್ಣಂಗೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ಉಳಿದಂತೆ, ಗೋಳಿಕಟ್ಟೆಯಲ್ಲಿ ಮನೆ ನಿರ್ಮಾಣವಾಗಿರುವ 80 ಮನೆಗಳಲ್ಲಿ 22 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜವರೇಗೌಡ ಮಾಹಿತಿ ನೀಡಿದರು.
ನಿರಾಶ್ರಿತರ ಪೈಕಿ 65 ಕುಟುಂಬಗಳು ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಉಳಿದಂತೆ 275 ಕುಟುಂಬಕ್ಕೆ ಮನೆ ಹಂಚಿಕೆ ಮಾಡಬೇಕಿದ್ದು, ಈ ಪ್ರಕ್ರಿಯೆಗಾಗಿ ಈಗಾಗಲೇ ಎಲ್ಲ ಫಲಾನುಭವಿಗಳು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ಇವುಗಳನ್ನು ಅಧಿಕಾರಿ ಹಂತದಲ್ಲಿ ಪರಿಶೀಲಿಸಿ ಲಾಟರಿ ಮೂಲಕ ಆಯ್ಕೆ ಮಾಡಿ ಮನೆ ನೀಡಲಾಗುವುದು ಎಂದು ತಿಳಿಸಿದರು.
ಸಂಜೆ ಲಾಟರಿ ಮೂಲಕ ಮನೆ ಹಂಚಿಕೆ ಪ್ರಕ್ರಿಯೆ ನಡೆಯಿತು. ಎರಡನೇ ಹಂತದಲ್ಲಿ ಉಳಿದವರಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಮಡಿಕೇರಿ ತಹಶೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕರಾದ ಶ್ರೀನಿವಾಸ್, ಶಿವಪ್ಪ, ಗ್ರಾಮ ಲೆಕ್ಕಿಗರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.