ADVERTISEMENT

ಬದುಕು ಬದಲಿಸಿದ ಗ್ಯಾರಂಟಿ ಯೋಜನೆಗಳು!

ಜಿಲ್ಲಾಮಟ್ಟದ ಗ್ಯಾರಂಟಿ ಉತ್ಸವದಲ್ಲಿ ಎಚ್.ಎಂ.ರೇವಣ್ಣ, ಪುಷ್ಪಾ ಅಮರನಾಥ್ ಭಾಗಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:16 IST
Last Updated 23 ನವೆಂಬರ್ 2025, 5:16 IST
ಗ್ಯಾರಂಟಿ ಉತ್ಸವವನ್ನು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಶನಿವಾರ ಮಡಿಕೇರಿಯಲ್ಲಿ ಉದ್ಘಾಟಿಸಿದರು
ಗ್ಯಾರಂಟಿ ಉತ್ಸವವನ್ನು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಶನಿವಾರ ಮಡಿಕೇರಿಯಲ್ಲಿ ಉದ್ಘಾಟಿಸಿದರು   

ಮಡಿಕೇರಿ: ‘ನುಡಿದಂತೆ ನಡೆದಿದ್ದೇವೆ, ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ, ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಎಲ್ಲ 5 ಯೋಜನೆಗಳ ಹಣ ಪಾವತಿಯಾಗುವಂತೆ ಮಾಡಿದ್ದೇವೆ. ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ’ ಎಂದು ಒಂದೆಡೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲೆಯ ಇಬ್ಬರು ಶಾಸಕರು ಪ್ರತಿಪಾದಿಸಿದರೆ, ಮತ್ತೊಂದೆಡೆ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ‘ನಮ್ಮ ಬದುಕು ಬದಲಾಗಿದೆ’ ಎಂದು ಅನಿಸಿಕೆಗಳನ್ನು ಹಂಚಿಕೊಂಡರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ‘ಗ್ಯಾರಂಟಿ ಕಾರ್ಯಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಕಂಡು ಬಂದವು.

ಮಾತನಾಡಿದ ಎಲ್ಲರೂ ಗ್ಯಾರಂಟಿ ಯೋಜನೆಗಳ ಲಾಭಗಳನ್ನು ಕುರಿತೇ ಮಾತನಾಡಿದರು. ಭಾಗವಹಿಸಿದ್ದ ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ತಮ್ಮ ಬದುಕು ಹೇಗೆ ಬದಲಾವಣೆಯಾಯಿತು ಎಂಬುದನ್ನು ವಿವರಿಸಿದರು.

ADVERTISEMENT

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾದ ರಂಗಸ್ವಾಮಿ, ಆಶಾಲತಾ ಸೇರಿದಂತೆ ಹಲವು ಮಂದಿ ಗ್ಯಾರಂಟಿ ಯೋಜನೆಗಳು ತಮಗೆ ಹೇಗೆ ಸಹಾಯಕವಾದವು ಎಂಬುದನ್ನು ತಿಳಿಸಿದರು.

ಅದರಲ್ಲೂ ರುಬಿನಾ ಅವರು, ‘ಸರ್ಕಾರ ಜಾರಿಗೆ ತಂದಿರುವ ಎಲ್ಲ 5 ಗ್ಯಾರಂಟಿ ಯೋಜನೆಗಳು ನನ್ನ ಕುಟುಂಬದ ಒಬ್ಬರಲ್ಲ ಒಬ್ಬರಿಗೆ ತಲುಪಿವೆ. ವಿದ್ಯುತ್ ಬಿಲ್ ಉಳಿತಾಯ, ಗೃಹಲಕ್ಷ್ಮಿ ಹಣ, ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣದಿಂದ ಬಡವರಾದ ನಮ್ಮ ಬದುಕು ಸುಧಾರಿಸಿದೆ. ಅದರಲ್ಲೂ ನನ್ನ ಮಗಳು ಯುವನಿಧಿ ಹಣವನ್ನು ಉಳಿತಾಯ ಮಾಡಿ ಲ್ಯಾಪ್‌ಟಾಪ್‌ ಖರೀದಿಸಿದ್ದಾಳೆ. ನಮ್ಮ ಕುಟುಂಬದ ಸ್ಥಿತಿಗತಿ ಸುಧಾರಿಸಿದ ಗ್ಯಾರಂಟಿ ಯೋಜನೆ ನೀಡಿದ ಸರ್ಕಾರಕ್ಕೆ ಧನ್ಯವಾದ ಅರ್ಪಿಸುವೆ’ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.

ಹೀಗೆ ಮಾತನಾಡಿದ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ಯೋಜನೆಯಿಂದ ತಮ್ಮ ಕುಟುಂಬಕ್ಕೆ ಲಾಭವಾಗಿರುವ ಕುರಿತು ಮಾತನಾಡಿ ಗಮನ ಸೆಳೆದರು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಈ.ರಾಜು ಮತ್ತು ತಂಡದವರು ಗ್ಯಾರಂಟಿ ಯೋಜನೆ ಕುರಿತು ಹಾಡು ಹಾಡಿದರು. ಗ್ಯಾರಂಟಿ ಯೋಜನೆಗ ಕಾರ್ಯಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನ ಮಳಿಗೆಗಳು ಅಲ್ಲಿದ್ದವು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಸಿಬ್ಬಂದಿ ಪವನ್ ಕುಮಾರ್, ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್‍ದಾಸ್(ಮಡಿಕೇರಿ), ಕಾಂತರಾಜು(ಸೋಮವಾರಪೇಟೆ), ವಿ.ಪಿ.ಶಶಿಧರ (ಕುಶಾಲನಗರ), ಪಿ.ವಿ.ಜಾನ್ಸನ್(ವಿರಾಜಪೇಟೆ), ಕಾಳಿಮಾಡ ಪ್ರಶಾಂತ್(ಪೊನ್ನಂಪೇಟೆ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಿ.ಆರ್.ಪ್ರಸನ್ನ ಕುಮಾರ್, ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಎ.ಈರಶಪ್ಪ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ, ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ ಜಿಲ್ಲಾ ಉದ್ಯೋಗಾಧಿಕಾರಿ ಮಂಜುನಾಥ ಭಾಗವಹಿಸಿದ್ದರು.

ಮಡಿಕೇರಿಯಲ್ಲಿ ಶನಿವಾರ ನಡೆದ ‘ಗ್ಯಾರಂಟಿ ಉತ್ಸವ’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು

ಜನವರಿಯಿಂದ ‘ಇಂದಿರಾ ಆಹಾರ ಕಿಟ್’ ಜಾರಿ; ಸಚಿವ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ ‘ಮುಂಬರುವ ಜನವರಿಯಿಂದಲೆ ‘ಇಂದಿರಾ ಆಹಾರ ಕಿಟ್’ ಯೋಜನೆ ಜಾರಿಗೆ ಬರಲಿದ್ದು ಇದರಿಂದ ಬಡವರಿಗೆ ಇನ್ನಷ್ಟು ಲಾಭವಾಗಲಿದೆ’ ಎಂದರು. ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಯಾವುದೇ ಧರ್ಮ ಜಾತಿ ನೋಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೂ ತಲುಪುತ್ತಿದ್ದು ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ ಎಂದು ಹೇಳಿದರು.

ಗ್ಯಾರಂಟಿ ಸರ್ಕಾರಕ್ಕೆ ಇರಲಿ ಮುಂದೆಯೂ ಬೆಂಬಲ; ಪೊನ್ನಣ್ಣ

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ ‘ಕಳೆದ ಎರಡೂವರೆ ವರ್ಷದಲ್ಲಿ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆಗಳಡಿಯಲ್ಲಿ ಜನರಿಗೆ ನೇರವಾಗಿ ₹ 1.5 ಲಕ್ಷ ಕೋಟಿಯನ್ನು ಯಾವುದೇ ಮಧ್ಯವರ್ತಿ ಇಲ್ಲದೇ ವಿತರಿಸಿದೆ. ಇಂತಹ ಬಡವರ ಪರವಾದ ಸರ್ಕಾರಕ್ಕೆ ಜನ ಬೆಂಬಲ ಮುಂದೆಯೂ ಇರಬೇಕು’ ಎಂದು ಹೇಳಿದರು. ‘ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ಬಡವರ ವಿರೋಧಿಗಳು’ ಎಂದು ವ್ಯಾಖ್ಯಾನಿಸಿದ ಅವರು ‘ಯಾವುದೇ ಜಾತಿ ಮತ ವರ್ಗ ಧರ್ಮ ಪಕ್ಷದ ಬೇಧ ಇಲ್ಲದೇ ಎಲ್ಲರಿಗೂ ಸಮಾನವಾಗಿ ನೀಡುತ್ತಿರುವ ಇಂತಹ ಗ್ಯಾರಂಟಿ ಯೋಜನೆಗಳ ಸರ್ಕಾರದ ಪರವಾಗಿ ಮಾತನಾಡದಿದ್ದರೆ ‌ಪ್ರಜಾತಂತ್ರ ವ್ಯವಸ್ಥೆಗೆ ಸೋಲಾಗುತ್ತದೆ’ ಎಂದು ಪ್ರತಿಪಾದಿಸಿದರು.

ವಸತಿ ಗ್ಯಾರಂಟಿ ಬೇಕು; ಮಂತರ್‌ಗೌಡ

ಶಾಸಕ ಡಾ.ಮಂತರ್ ಗೌಡ ಮಾತನಾಡಿ ‘ಪಂಚ ಗ್ಯಾರಂಟಿ ಯೋಜನೆಗಳ ಜೊತೆ ಮುಂದಿನ ದಿನಗಳಲ್ಲಿ ಬಡಜನರಿಗಾಗಿ ವಸತಿ ಗ್ಯಾರಂಟಿ ಯೋಜನೆಯನ್ನೂ ಜಾರಿಗೊಳಿಸಬೇಕಿದೆ’ ಎಂದು ಸಲಹೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಹಲವು ಮಂದಿ ಲೈನ್‌ಮನೆಗಳಲ್ಲಿ ವಾಸವಿದ್ದಾರೆ. ಇವರಿಗಾಗಿ ವಸತಿ ಯೋಜನೆಯನ್ನು ಜಾರಿಗೆ ತರಬೇಕು. ಎಲ್ಲ ಗ್ಯಾರಂಟಿ ಯೋಜನೆಗಳನ್ನು ಶೇ 100ರಷ್ಟು ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅರ್ಹರ ತಲುಪಲಿ  ‘ಗ್ಯಾರಂಟಿ’ 

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷರಾದ ಎಚ್.ಎಂ.ರೇವಣ್ಣ ಮಾತನಾಡಿ ‘ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಬೇಕಿದೆ. ಹಾಗಾಗಿ ಅಧಿಕಾರಿಗಳು ಜನರ ಬಳಿಗೆ ಹೋಗಬೇಕು’ ಎಂದು ಸೂಚಿಸಿದರು. ಮೃತಪ‍ಟ್ಟವರ ಖಾತೆಗೂ ಗೃಹಲಕ್ಷ್ಮಿ ಹಣ ಹೋಗುವುದನ್ನು ತಡೆಯಬೇಕು. ಜಿಎಸ್‌ಟಿ ಐಟಿ ಪಾವತಿದಾರರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿಲ್ಲ. ಅದನ್ನು ಬಗೆಹರಿಸಲಾಗುತ್ತಿದೆ ಎಂದರು.

ಕೆಲಸವೇ ಶಾಶ್ವತ: ಪುಷ್ಪಾ ಅಮರನಾಥ್’

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ ‘ಕೆಲಸಗಳು ಉಳಿಯುತ್ತವೆ ಟೀಕೆಗಳು ಸಾಯುತ್ತವೆ’ ಎಂಬುದನ್ನು ಸರ್ಕಾರ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದು ಪ್ರತಿಪಾದಿಸಿದರು. ಮೊದಲಿಗೆ ಈ ಯೋಜನೆಗಳನ್ನು ವಿರೋಧ ಪಕ್ಷಗಳು ಟೀಕಿಸಿದವು. ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದ ನಂತರ ಈ ಯೋಜನೆಗಳನ್ನೇ ವಿರೋಧ ಪಕ್ಷಗಳು ಅನುಸರಿಸಿದವು. ವಿರೋಧ ಪಕ್ಷಗಳು ನೀಡಿದ ಭರವಸೆಯಂತೆ ₹ 15 ಲಕ್ಷ ಹಣ ಯಾರದ್ದಾದರೂ ಖಾತೆಗೆ ಬಂದಿದೆಯೇ? ಇಂಧನ ಬೆಲೆಗಳು ಇಳಿಕೆಯಾಗಿದ್ದವಾ? ಎಂದು ಪ್ರಶ್ನಿಸಿದ ಅವರು ‘ನಮ್ಮದು ನುಡಿದಂತೆ ನಡೆದ ಸರ್ಕಾರ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.