ADVERTISEMENT

ಕೊಡಗು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ

ಡಿ.13, 16, 20ರಂದು ಮೇಳ, ಸದುಪಯೋಗಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮನವಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 3:07 IST
Last Updated 11 ಡಿಸೆಂಬರ್ 2022, 3:07 IST
ಬೃಹತ್ ಉದ್ಯೋಗ ಮೇಳ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರಪತ್ರ ಬಿಡುಗಡೆ ಮಾಡಿದರು. ಕೌಶಲ್ಯ ಅಭಿವೃದ್ಧಿ ಇಲಾಖೆಯ ಉಪ‌ನಿರ್ದೇಶಕಿ ಉಮಾ, ಸಹಾಯಕ ನಿರ್ದೇಶಕಿ ರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಇದ್ದಾರೆ
ಬೃಹತ್ ಉದ್ಯೋಗ ಮೇಳ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರಪತ್ರ ಬಿಡುಗಡೆ ಮಾಡಿದರು. ಕೌಶಲ್ಯ ಅಭಿವೃದ್ಧಿ ಇಲಾಖೆಯ ಉಪ‌ನಿರ್ದೇಶಕಿ ಉಮಾ, ಸಹಾಯಕ ನಿರ್ದೇಶಕಿ ರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಇದ್ದಾರೆ   

ಮಡಿಕೇರಿ: ಕೊಡಗು ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಜಿಲ್ಲೆಯ 3 ಕಡೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ನಿರುದ್ಯೋಗಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮನವಿ ಮಾಡಿದರು.

‘ಡಿ. 13ರಂದು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 16ರಂದು ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ 20ರಂದು ಗೋಣಿಕೊಪ್ಪಲು ಕಾವೇರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ‘ಸರ್ವರಿಗೂ ಉದ್ಯೋಗ’ ಎಂಬ ಪರಿಕಲ್ಪನೆಯಡಿ ಉದ್ಯೋಗ ಮೇಳ ನಡೆಯಲಿದೆ’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಡಗು ಜಿಲ್ಲೆಯ ಎಲ್ಲ ವಿದ್ಯಾವಂತ ನಿರುದ್ಯೋಗಿಗಳು ಇದರಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದು. ಬಹಳಷ್ಟು ಪ್ರತಿಷ್ಠಿತ ಕಂಪನಿಗಳು ಇದರಲ್ಲಿ ಭಾಗಿಯಾಗಲಿವೆ ಎಂದರು.

ADVERTISEMENT

ಎಸ್ಸೆಸ್ಸೆಲ್ಸಿ, ಪಿಯು, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಇದರಲ್ಲಿ ಭಾಗವಹಿಸಬಹುದು. ಇದೊಂದು ಸುವರ್ಣ ಅವಕಾಶವಾಗಿದ್ದು, ಉದ್ಯೋಗಾಂಕ್ಷಿಗಳು ಇದರ ಉಪಯೋಗ ಪಡೆಯಬೇಕು ಎಂದು ಹೇಳಿದರು.

‘ಎಲ್ ಅಂಡ್ ಟಿ, ಥಿಯೋರಾಮ್ ಕಂಪನಿ, ಕಾಫಿ ಕ್ಯೂರಿಂಗ್, ಮಾಂಡೋವಿ ಮೋಟಾರ್ಸ್, ಸಾಯಿ ಗಾರ್ಮೆಂಟ್ಸ್, ಪ್ಯಾಲೇಸ್ ಟೊಯೋಟಾ, ಟ್ರಿಟೆಂಟ್ ಅಟೋ ಮೊಬೈಲ್, ಭಾರತ ಸುಜುಕಿ, ಟಾಟಾ ಸ್ಟ್ರೈಲಿ, ಪ್ರೇರಣಾ ಮೋಟಾರ್ಸ್, ಓರಿಯಂಟ್ ಬೆಲ್, ಮತ್ತಿತರ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಅಭ್ಯರ್ಥಿಗಳು ಗೂಗಲ್ ವೆಬ್‍ಲಿಂಕ್ http://forms/gle/ErcWUnGyps4SvJRr7 ನೋಂದಾಯಿಸಬಹುದು’ ಎಂದು ಕೌಶಲ್ಯ ಅಭಿವೃದ್ಧಿ ಇಲಾಖೆಯ ಉಪ‌ನಿರ್ದೇಶಕಿ ಉಮಾ ಮಾಹಿತಿ ನೀಡಿದರು.

100ಕ್ಕಿಂತ ಹೆಚ್ಚು ಮಂದಿ ಅರ್ಜಿ ಹಾಕಿದ್ದಾರೆ. ಒಂದು ವೇಳೆ ನೋಂದಾಯಿಸಲು ಸಾಧ್ಯವಾಗದೇ ಹೋದವರು ಚಿಂತಿಸುವ ಅಗತ್ಯ ಇಲ್ಲ. ನೇರವಾಗಿಯೂ ಉದ್ಯೋಗಮೇಳಕ್ಕೆ ಬಂದು ಭಾಗಿಯಾಗಬಹುದು ಎಂದರು.

www.koushalkar.comನಲ್ಲೂ ಕೌಶಲ ತರಬೇತಿ ಮೊದಲಾದವುಗಳಿಗೆ ಅರ್ಜಿ ಹಾಕಬಹುದು.

https://skillconnect.kaushalkar.com/ ವೆಬ್‌ಸೈಟ್‌ ಸಹ ನಿರುದ್ಯೋಗಿಗಳ ಸಹಾಯಕ್ಕೆ ಬರಲಿದೆ. ಎಲ್ಲರೂ ಕೌಶಲ ತರಬೇತಿ ಪಡೆದುಕೊಂಡರೆ ಉದ್ಯೋಗ ಗಳಿಸುವುದು ಸುಲಭವಾಗಲಿದೆ. ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ. ಮಡಿಕೇರಿಯಲ್ಲಿ ಒಂದೇ ಕಡೆ ಉದ್ಯೋಗ ಮೇಳ ಮಾಡಿದರೆ ಜಿಲ್ಲೆಯ ಗಡಿಭಾಗದಿಂದ ಬರುವುದು ಅಭ್ಯರ್ಥಿಗಳಿಗೆ ಕಷ್ಟವಾಗಲಿದೆ. ಈ ಕಾರಣದಿಂದ ಉದ್ಯೋಗಮೇಳವನ್ನು ವಿಕೇಂದ್ರೀಕರಣ ಮಾಡಿ, ಜಿಲ್ಲೆಯ 3 ಕಡೆ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.