ಗೋಣಿಕೊಪ್ಪಲು: ಪ್ರಸಿದ್ಧ ಕುಂದಾ ಬೆಟ್ಟದಲ್ಲಿ ಕೊಡಗಿನ ಮೊದಲ ‘ಬೋಡ್ ನಮ್ಮೆ’ಗೆ ಶನಿವಾರ ಚಾಲನೆ ದೊರಕಿತು. ಶನಿವಾರ ಕಾವೇರಿ ತೀರ್ಥ ಪ್ರೋಕ್ಷಣೆ ನಡೆಯಲಿದೆ.
ಪೊನ್ನಂಪೇಟೆ ತಾಲ್ಲೂಕಿನ ಬೊಟ್ಟಿಯತ್ನಾಡ್ ಕುಂದಾ ಹಾಗೂ ಮುಗುಟಿಗೇರಿ ಗ್ರಾಮಕ್ಕೆ ಸೇರಿದ ಕುಂದ ಬೆಟ್ಟದಲ್ಲಿರುವ ಈಶ್ವರ ದೇವಸ್ಥಾನದ ಅಂಬಲದಲ್ಲಿ ಕಟ್ಟ್ ಹಾಕುವ ಮೂಲಕ ವರ್ಷದ ಮೊದಲ ಬೋಡ್ ನಮ್ಮೆಗೆ ಶುಕ್ರವಾರ ಚಾಲನೆ ನೀಡಲಾಯಿತು. ‘ಕುಂದತ್ ಬೊಟ್ಟ್ಲ್ ನೇಂದಾ ಕುದುರೆ... ಪಾರಣ ಮಾನಿಲ್ ಅಳ್ಂಜ ಕುದುರೆ..’ ಎಂಬ ಬೋಡ್ ನಮ್ಮೆಯ ಜನಪದ ಹಾಡಿನಂತೆ ಬೊಟ್ಟಿಯತ್ ನಾಡಿನ ಬೋಡ್ ನಮ್ಮೆಗೆ ಕಟ್ಟುಪಾಡು ಬಿದ್ದಿತು.
ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ನೇತೃತ್ವದಲ್ಲಿ (ತಕ್ಕಾಮೆಯಲ್ಲಿ) ನಡೆಯುವ ಈ ಹಬ್ಬಕ್ಕೆ ಸಾಂಪ್ರದಾಯಿಕ ಹಾಡು ಹೇಳುತ್ತಾ ಡೋಲು ಬಾರಿಸುವ ಮೂಲಕ ಅಂಬಲದಲ್ಲಿ ಕುಳಿತು ಹಬ್ಬದಲ್ಲಿ ನಡೆದುಕೊಳ್ಳಬೇಕಾದ ನಿಯಮಗಳ ಬಗ್ಗೆ ಚರ್ಚಿಸಲಾಯಿತು.
ಪ್ರತಿ ವರ್ಷ ಕಾವೇರಿ ತೀರ್ಥೋದ್ಭವದಂದು ಹಾಗೂ ಮರು ದಿವಸ ಕುಂದ ಬೆಟ್ಟದಲ್ಲಿ ಬೋಡ್ ನಮ್ಮೆ ನಡೆಯುವ ಪದ್ಧತಿಯಂತೆ ಶುಕ್ರವಾರ ಸಾಂಪ್ರದಾಯಿಕ ಮನೆಕಳಿ ನಡೆಯಿತು. ಶನಿವಾರ ಕುದುರೆ ಹಬ್ಬ ಹಾಗೂ ಬೆಟ್ಟ ಹತ್ತುವ ಕಾರ್ಯ ಜರುಗಲಿದೆ. ಕಾವೇರಿ ತೀರ್ಥ ತಂದು ಬೆಟ್ಟದ ಮೇಲಿರುವ ಬೊಟ್ಲಪ್ಪನಿಗೆ ಅರ್ಪಿಸುವ ಆಚರಣೆಗಳು ನಡೆಯಲಿವೆ.
ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬದ ಬಲ್ಯಮನೆಯಿಂದ ತಲಾ ಒಂದು ಕೃತಕ ಕುದುರೆಗಳನ್ನು ಸಿಂಗರಿಸಿ ಅವುಗಳ ಮೂಲಕ ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಈಶ್ವರ ದೇವಸ್ಥಾನದ ಸಮೀಪದ ಅಂಬದಲ್ಲಿ ಸೇರಿ ಕುಂದಾ ಬೆಟ್ಟವನ್ನು ಹತ್ತಲು ಪ್ರಾರಂಭಿಸುತ್ತಾರೆ. ಕಡಿದಾದ ಬೆಟ್ಟವನ್ನು ಏರಿ ಅಲ್ಲಿ ಬೊಟ್ಲಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಬ್ಬವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.