ADVERTISEMENT

ಜುಲೈ ಅಂತ್ಯಕ್ಕೆ ಕೊಡಗು ನಿರಾಶ್ರಿತರಿಗೆ ಸೂರು: ಎಂ.ಟಿ.ಬಿ.ನಾಗರಾಜ್‌ ಭರವಸೆ

ಜಂಬೂರು ಗ್ರಾಮದಲ್ಲಿ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಭರವಸೆ, ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:45 IST
Last Updated 29 ಜೂನ್ 2019, 19:45 IST
ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ನೆರೆ ಸಂತ್ರಸ್ತರ ಮನೆ ವೀಕ್ಷಿಸಿದ ಸಚಿವ ಎಂ.ಟಿ.ಬಿ. ನಾಗರಾಜ್‌
ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ನೆರೆ ಸಂತ್ರಸ್ತರ ಮನೆ ವೀಕ್ಷಿಸಿದ ಸಚಿವ ಎಂ.ಟಿ.ಬಿ. ನಾಗರಾಜ್‌   

ಮಡಿಕೇರಿ: ‘ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಗಳ ಪೈಕಿ ಎರಡು ಸ್ಥಳಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ಅಲ್ಲಿ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿಯಷ್ಟೇ ಬಾಕಿಯಿದ್ದು, ಅದು ಪೂರ್ಣಗೊಂಡ ಬಳಿಕ ಜುಲೈ ಅಂತ್ಯಕ್ಕೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು’ ಎಂದು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಇಲ್ಲಿ ಶನಿವಾರ ಭರವಸೆ ನೀಡಿದರು.

ಪುನರ್ವಸತಿ ಮನೆ ನಿರ್ಮಾಣ ಸ್ಥಳಗಳಾದ ಜಂಬೂರು, ಕರ್ಣಂಗೇರಿ, ಮದೆಗೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

‘ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಜಿಲ್ಲೆಯ ಮೂರು ಸ್ಥಳಗಳಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿವೆ. ಮನೆಗಳನ್ನು ನೀಡಲು ತಡವಾಗಿದ್ದರೂ ಪರವಾಗಿಲ್ಲ. ಉತ್ತಮ ಗುಣಮಟ್ಟದ ಮನೆಗಳನ್ನೇ ಮೈತ್ರಿ ಸರ್ಕಾರ ನೀಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಗುಣಮಟ್ಟದ ಕಾಮಗಾರಿ ನಡೆದಿದೆ. ಮನೆ ವೀಕ್ಷಿಸಿ ನನಗೆ ಸಂತಸವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮನೆ ನಿರ್ಮಿಸುತ್ತಿರುವ ಕಾರಣಕ್ಕೆ ಸ್ವಲ್ಪ ತಡವಾಗಿದೆ. ಮೂಲಸೌಲಭ್ಯಗಳನ್ನು ಕಲ್ಪಿಸಿದ ಕೂಡಲೇ ಕರ್ಣಂಗೇರಿ, ಮದೆನಾಡುವಿನ ಎರಡು ಕಡೆ ಮನೆ ಹಸ್ತಾಂತರಿಸಲಾಗುವುದು’ ಎಂದು ಹೇಳಿದರು.

ವಾಸ್ತವ ಅರಿಯಲು ವಾಸ್ತವ್ಯ:‘ಎಲ್ಲೋ ಕುಳಿತು ಆಡಳಿತ ಮಾಡಿದರೆ ಗ್ರಾಮೀಣ ಪ್ರದೇಶದ ಸಮಸ್ಯೆಗಳು ತಿಳಿಯುವುದಿಲ್ಲ. ಗ್ರಾಮಗಳ ವಾಸ್ತವ ಅರಿಯಲು ಮುಖ್ಯಮಂತ್ರಿ, ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಅದನ್ನೂ ವಿರೋಧ ಪಕ್ಷಗಳು ವಿರೋಧಿಸುತ್ತಿವೆ’ ಎಂದು ಸಚಿವರು ದೂರಿದರು.

‘ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿ ಜನರಿಂದ ಮೆಚ್ಚುಗೆ ಗಳಿಸಿದ್ದರು. ಅದನ್ನು ಮುಂದುವರಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.