
ಮಡಿಕೇರಿ: ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿಯ ಚಾಂಪಿಯನ್ಸ್ ಟೂರ್ನಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಶುಕ್ರವಾರ ಆರಂಭಗೊಂಡಿತು. ಮೊದಲ ದಿನವೇ ಭರ್ಜರಿ ಗೆಲುವು ಹಾಗೂ ಗೋಲುಗಳಿಗೆ ಟೂರ್ನಿ ಸಾಕ್ಷಿಯಾಯಿತು.
ಕೊಡವ ಹಾಕಿ ಅಕಾಡೆಮಿ ವತಿಯಿಂದ ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆರಂಭವಾದ ಈ ಮಹತ್ವದ ಟೂರ್ನಿಯಲ್ಲಿ ಕಳೆದ 25 ವರ್ಷಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ 13 ತಂಡಗಳು ಭಾಗವಹಿಸಿವೆ.
ಮೊದಲ ದಿನವೇ ನೆಲ್ಲಮಕ್ಕಡ ತಂಡ ಇಲ್ಲಿ ಗೋಲುಗಳ ಮಳೆಯನ್ನೇ ಹರಿಸಿತು. ಮಾಚಮಾಡ ತಂಡದ ವಿರುದ್ಧ 6–0ಯಿಂದ ಭರ್ಜರಿ ಗೆಲುವು ದಾಖಲಿಸಿ ಪಾರಮ್ಯ ಮೆರೆಯಿತು. ನೆಲ್ಲಮಕ್ಕಡ ಪೂವಣ್ಣ ಹಾಗೂ ಅಯ್ಯಪ್ಪ ತಲಾ ಎರಡು ಗೋಲು, ತಿಮ್ಮಯ್ಯ ಹಾಗೂ ಸಚಿನ್ ತಲಾ ಒಂದು ಗೋಲು ದಾಖಲಿಸಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು.
ಮತ್ತೊಂದು ಪಂದ್ಯಲ್ಲಿ ಮಂಡೇಪಂಡ ತಂಡ ಪರದಂಡ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲವು ಸಾಧಿಸಿತು.
ಮಂಡೇಪಂಡ ಪರ ಚಂದನ್ ಕಾರ್ಯಪ್ಪ ಹಾಗೂ ಚಂಗಪ್ಪ ಎಂ.ಪಿ ತಲಾ ಒಂದು ಗೋಲು ಬಾರಿಸಿದರು. ಪರದಂಡ ಪರ ರಂಜನ್ ಅಯ್ಯಪ್ಪ ಗೋಲು ದಾಖಲಿಸಿದರು.
ಆದರೆ, ಚೆಪ್ಪುಡಿರ ಮತ್ತು ಪಳಂಗಂಡ ನಡುವಿನ ಪಂದ್ಯ ಹಾಗೂ ಕಲಿಯಂಡ ಮತ್ತು ಕುಪ್ಪಂಡ ನಡುವಿನ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ಕಲಿಯಂಡ ಮತ್ತು ಕುಪ್ಪಂಡ ತಂಡಗಳು ತಲಾ ಒಂದು ಗೋಲು ಗಳಿಸಿದರೆ, ಚೆಪ್ಪುಡಿರ ಮತ್ತು ಪಳಂಗಂಡ ತಂಡಗಳು ಯಾವುದೇ ಗೋಲು ಗಳಿಸದೇ ಸಮಬಲ ಸಾಧಿಸಿದವು.
ಕಲಿಯಂಡ ಪರ ಚಿರಂತ್ ಹಾಗೂ ಕುಪ್ಪಂಡ ಪರ ಸೋಮಯ್ಯ ಗೋಲು ಗಳಿಸಿದರು.
ಇದಕ್ಕೂ ಮುನ್ನ ಉದ್ಘಾಟನಾ ಸಮಾರಂಭದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಆರಂಭಿಕ 1997 ರಲ್ಲಿ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರನ್ನು ಹಾಗೂ ವೀಕ್ಷಕ ವಿವರಣೆಗಾರರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕಳೆದ 25 ವರ್ಷಗಳ ಕಾಲ ಹಾಕಿ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಿರುವ 25 ಕೊಡವ ಕುಟುಂಬಗಳ ಪಟ್ಟೆದಾರರನ್ನು ಗೌರವಿಸಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.
ಎಸ್ಎಲ್ಎನ್ ಗ್ರೂಪ್ನ ಮುಖಂಡರಾದ ವೆಂಕಟಾಚಲಂ ಸಾತಪ್ಪನ್, ವೇಲಾಯುಧಂ ಮಣಿ, ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಚೆಪ್ಪುಡಿರ ಎಸ್.ಪೂಣಚ್ಚ, ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರುಗಳಾದ ಮುದ್ದಂಡ ರಶಿನ್ ಸುಬ್ಬಯ್ಯ, ಬೊಳ್ಳೆಪಂಡ ಜೆ.ಕಾರ್ಯಪ್ಪ, ಕಾಳಿಯಂಡ ಸಂಪನ್ ಅಯ್ಯಪ್ಪ, ಮುಕ್ಕಾಟಿರ ಎಸ್.ಸೋಮಯ್ಯ, ಚೆಕ್ಕೇರ ಆದರ್ಶ್, ಮಂಡೇಪಂಡ ಮುಖೇಶ್ ಮೊಣ್ಣಯ್ಯ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಹಾಕಿ ಅಕಾಡೆಮಿ ಹಾಕಿ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಪಾಂಡಂಡ ಕುಟ್ಟಪ್ಪ ಅವರ ಹಲವು ವರ್ಷಗಳ ಕನಸನ್ನು ನನಸು ಮಾಡಿದ ತೃಪ್ತಿ ನಮಗಿದೆಪಾಂಡಂಡ ಕೆ.ಬೋಪಣ್ಣ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ.
ಒಲಂಪಿಯನ್ ಬೊಳ್ಳಂಡ ಪ್ರಮೀಳ ಅಯ್ಯಪ್ಪ ಮಾತನಾಡಿ ‘ನನ್ನ ಕ್ರೀಡಾಸಕ್ತಿಗೆ ತಂದೆ ಸಹೋದರ ಹಾಗೂ ಪತಿ ಪ್ರೋತ್ಸಾಹ ನೀಡಿದ ಪರಿಣಾಮ ನಾನು ಒಲಂಪಿಯನ್ ಆಗಿದ್ದೇನೆ. ಪೋಷಕರು ಮಕ್ಕಳ ಇಚ್ಛೆಗೆ ತಕ್ಕಂತೆ ಸ್ಫೂರ್ತಿ ತುಂಬಬೇಕು ಮತ್ತು ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು. ಪೋಷಕರು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರದೆ ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗಬೇಕು ಮತ್ತು ಕ್ರೀಡಾಸಕ್ತಿಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು. ಮೊದಲ ಬಾರಿ ಒಲಂಪಿಯನ್ ಆಗಬೇಕೆನ್ನುವ ಕನಸು ಭಗ್ನವಾದಾಗ ಕ್ರೀಡಾಕ್ಷೇತ್ರವನ್ನು ತ್ಯಜಿಸಬೇಕೆನ್ನುವ ನಿರ್ಧಾರಕ್ಕೆ ಬಂದೆ. ಆದರೆ ಮನೆಯಲ್ಲಿ ನನಗೆ ದೊರೆತ ಪ್ರೋತ್ಸಾಹದಿಂದ ಮತ್ತು ನಾಲ್ಕು ವರ್ಷಗಳ ನಿರಂತರ ಪ್ರಯತ್ನದಿಂದ ಒಲಂಪಿಯನ್ ಆಗಲು ಸಾಧ್ಯವಾಯಿತು. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು ಪೋಷಕರ ಪ್ರೋತ್ಸಾಹದ ಅಗತ್ಯವಿದೆ ಎಂದರು. ಮಾಜಿ ಅಂತರಾಷ್ಟ್ರೀಯ ಹಾಕಿಪಟು ಕಾಳಿಮಾಡ ಎಂ.ಸೋಮಯ್ಯ ಮಾತನಾಡಿ ಹಾಕಿಯ ಬೆಳವಣಿಗೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಎಸ್ಎಲ್ಎನ್ ಗ್ರೂಪ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿಬ್ ಸಿಂಗ್ ಮಾತನಾಡಿ ‘ಹಾಕಿ ಕ್ರೀಡೆಗೆ ಕೊಡಗಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ದೊರೆಯುತ್ತಿರುವುದು ಶ್ಲಾಘನೀಯ. ಇನ್ನು ಮುಂದೆಯೂ ಹಾಕಿ ಉಳಿಯಲಿ ಬೆಳೆಯಲಿ’ ಎಂದು ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.