
ಕುಶಾಲನಗರ: ಮುಳ್ಳುಸೋಗೆ ಕುವೆಂಪು ಬಡಾವಣೆಯ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಹಾಗೂ ಕುವೆಂಪು ಪುತ್ಥಳಿ ನಿರ್ಮಾಣ ಮಾಡುವ ಚಿಂತನೆ ಇದೆ ಎಂದು ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಕೆ.ದಯಾನಂದ ಹೇಳಿದರು.
ಇಲ್ಲಿನ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯ ಕುವೆಂಪು ಬಡಾವಣೆಯ ಹಿತರಕ್ಷಣಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುವೆಂಪು ಬಡಾವಣೆಯಲ್ಲಿ 90 ಮನೆಗಳಿದ್ದು, ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಇದ್ದೇವೆ. ಹಾಗೆಯೇ ಬಡಾವಣೆಯ ಅಭಿವೃದ್ಧಿಗೆ ಎಲ್ಲರೂ ಸೇರಿ ಒಕ್ಕೊರಲಿನಿಂದ ಹೋರಾಟ ನಡೆಸಿದ ಫಲವಾಗಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕಾಡಿದ ಮಳೆಗಾಲದ ಪ್ರವಾಹ ನಿಯಂತ್ರಿಸುವ ಸಲುವಾಗಿ ₹4 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಂಚಿನಲ್ಲಿ ತಡೆಗೋಡೆ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಬಡಾವಣೆಯ ಕುಟುಂಬಗಳ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮೆಮೋರಿ ಪರೀಕ್ಷೆ, ರಸಪ್ರಶ್ನೆ ನಡೆಯಿತು ಹಾಗೆಯೇ ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆದವು.ಮಧ್ಯಾಹ್ನದ ಭೋಜನದ ನಂತರ ಮಕ್ಕಳು ಹಾಗೂ ನಿವಾಸಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನರಂಜಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಇದೇ ವೇಳೆ ಬಡಾವಣೆಯ ನಿವಾಸಿಗಳ ಪ್ರತಿಭಾವಂತ ಮಕ್ಕಳು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಬಡಾವಣೆಯ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಬೀನಾ ಅನಿಲ್ ಕುಮಾರ್, ಖಜಾಂಚಿ ಬಿ.ಎಂ.ರವೀಂದ್ರ, ಸಲಹೆಗಾರರಾದ ಕೆ.ಜಿ.ಚಂದ್ರಶೇಖರ್, ನಿರ್ದೇಶಕ ರಾದ ಸಿ.ಕೆ.ಹೇಮಂತ್, ಅಮರಾವತಿ, ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು. ಬುಟ್ಟಂಡ ಪಿ.ಶರಿ ಕಾರ್ಯಪ್ಪ ನಿರೂಪಿಸಿದರು. ಚಂದ್ರಶೇಖರ್ ಸ್ವಾಗತಿಸಿದರು.
ಬಿ.ಎಂ.ರವೀಂದ್ರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.