
ನಾಪೋಕ್ಲು: ಇಲ್ಲಿಗೆ ಸಮೀಪದ ಕುಯ್ಯಂಗೇರಿ ಭಗವತಿ ದೇವಾಲಯದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮ ಕಳಶೋತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಬ್ರಹ್ಮಕಳಶೋತ್ಸವದ ಅಂಗವಾಗಿ ಹೋಮ, ಹವನ ಸೇರಿದಂತೆ ಧ್ವಜಾರೋಹಣ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಗಣಪತಿ ಹೋಮ, ಬಿಂಬ ಜಲದಿವಾಸ, ವಿವಿಧ ಪೂಜಾ ವಿಧಾನಗಳು ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಜರುಗಿತು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಗಣಪತಿ ಪ್ರತಿಷ್ಠಾ ಹೋಮ, ಕಳಶಾರಾಧನೆ, ಆಶ್ಲೇಷ ಬಲಿ, ಬಿಂಬ ಶುದ್ಧಿ ಕಲಶ, ಬಲಿಕ ಚಂಡಿಕಾ ಹೋಮ ಸೇರಿದಂತೆ ಇನ್ನಿತರ ಪೂಜಾ ವಿಧಿ ವಿಧಾನಗಳು ಜರುಗಿ ತೀರ್ಥಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮ ದೇವಿ ಪ್ರತಿಷ್ಠಾ ಹೋಮ, ಕಳಸ ಪೂಜೆ, ಹಾಗೂ ಭಗವತಿ ದೇವಿಯ ಬಿಂಬ ಪ್ರತಿಷ್ಠೆ ಅಷ್ಟಬoಧ ಲೇಪನ ಹಾಗೂ ಬ್ರಹ್ಮ ಕಳಸ ಅಭಿಷೇಕ ಮಹಾಪೂಜೆ ಫಲ ಮಂತ್ರಾಕ್ಷತೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಬ್ರಹ್ಮ ಕಳಶೋತ್ಸವ ಸಂಪನ್ನಗೊಂಡಿತು. ಪೂಜಾ ವಿಧಿ ವಿಧಾನಗಳನ್ನು ತಂತ್ರಿಗಳಾದ ಎ.ಜಿ.ಪಂಡರೀಶ ಅರಳಿತ್ತಾಯ, ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಊರಿನ ತಕ್ಕ ಮುಖ್ಯಸ್ಥರು, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುರಿಕ್ಕಡ ಆರ್.ದೇವಿ ಪ್ರಸಾದ್, ಕಾರ್ಯದರ್ಶಿ ತಂಬಂಡ ಎಂ. ಸೋಮಯ್ಯ, ಆಡಳಿತ ಮಂಡಳಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.