ADVERTISEMENT

3 ತಿಂಗಳಿನಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ನಿವೇಶನ!

ವಿರಾಜಪೇಟೆ ಕ್ಷೇತ್ರದಲ್ಲಿ ನಿವೇಶನ ಹಂಚಿಕೆಯ ಅಭಿಯಾನ; ಎ.ಎಸ್.ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:11 IST
Last Updated 12 ಜುಲೈ 2025, 6:11 IST
ಎ.ಎಸ್‌.ಪೊನ್ನಣ್ಣ 
ಎ.ಎಸ್‌.ಪೊನ್ನಣ್ಣ    

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಇನ್ನು 3 ತಿಂಗಳಿನಲ್ಲಿ ಹಕ್ಕುಪತ್ರ ನೀಡಲಾಗುವುದು ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.

ಬುಡಕಟ್ಟು ಪಂಗಡಗಳಿಗೆ ಸೇರಿದ ಸದ್ಯ ಲೈನ್‌ಮನೆಗಳಲ್ಲಿ ವಾಸ ಇರುವ 1,590 ಮಂದಿ ಹಾಗೂ ಇನ್ನುಳಿದ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಭರದಿಂದ ಸಿದ್ಧತೆಗಳು ನಡೆದಿವೆ. ಈಗಾಗಲೇ, 61 ಎಕರೆ ಜಾಗವನ್ನೂ ನಿಗದಿಪಡಿಸಲಾಗಿದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿರಾಜಪೇಟೆ ಕ್ಷೇತ್ರದಲ್ಲಿ ನಿವೇಶನ ರಹಿತರನ್ನು ಗುರುತಿಸಿ ಹಕ್ಕುಪತ್ರ ನೀಡುವ ಕುರಿತು ದೊಡ್ಡದಾದ ಅಭಿಯಾನವೇ ಆರಂಭಗೊಂಡಿದೆ. ನಿವೇಶನ ರಹಿತರೆಲ್ಲರಿಗೂ ನಿವೇಶನ ನೀಡಲು 100ಕ್ಕೂ ಅಧಿಕ ಎಕರೆ ಭೂಮಿ ಬೇಕಾಗುತ್ತದೆ. ಅಷ್ಟು ದೊಡ್ಡ ಪ್ರಮಾಣದ ಭೂಮಿ ಸಿಗುತ್ತಿಲ್ಲ. ಸದ್ಯ, ಸುಮಾರು 2 ಸಾವಿರ ಮಂದಿಗೆ ನಿವೇಶನ ನೀಡಲು ಕ್ರಮ ವಹಿಸಲಾಗಿದೆ ಎಂದರು.

ADVERTISEMENT

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ, ಪೊನ್ನಂಪೇಟೆ, ಮಡಿಕೇರಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸಲಾಗಿದೆ. ನಿವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ ನೀಡುವ ಈ ಬೃಹತ್ ಅಭಿಯಾನವನ್ನು ಇನ್ನು 2–3 ತಿಂಗಳಿನಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಿರಿಯರನ್ನು ಜಿಲ್ಲೆಗೆ ಕರೆಸಿ ಅವರಿಂದಲೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಈ ಕುರಿತು ಈಗಾಗಲೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಅಕ್ರಮ ಪ್ರವೇಶ ಬೇಡ

ಯಾರೂ ಸಹ ಯಾವುದೇ ಕಾರಣಕ್ಕೂ ಅಕ್ರಮವಾಗಿ ಪ್ರವೇಶ ಮಾಡಿ ಗುಡಿಸಲು ಹಾಕಿಕೊಳ್ಳುವುದಕ್ಕೆ ಮುಂದಾಗಬಾರದು. ನಿವೇಶನ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ತಾಳ್ಮೆಯಿಂದ ಇರಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಮನವಿ ಮಾಡಿದರು.

ನಿವೇಶನ ರಹಿತರು ಮೊದಲು ಆಯ ಗ್ರಾಮ ‍ಪಂಚಾಯಿತಿ ಮಟ್ಟದಲ್ಲಿ ನಿವೇಶನ ರಹಿತರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಬೇಕು. ಗ್ರಾಮಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದು, ಆಗ ಮಾತ್ರ ನಿವೇಶನ ಸಿಗುತ್ತದೆ ಎಂದರು.

ಹುಲಿಗಳು ಜಾನುವಾರು ಮೇಲೆ ದಾಳಿ ನಡೆಸಿ ಕೊಂದು ಹಾಕಿದಾಗ ಜನರು ಯಾವುದೇ ಕಾರಣಕ್ಕೂ ಆ ಸ್ಥಳಕ್ಕೆ ಹೋಗಬಾರದು. ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುತ್ತಾರೆ. ಆದರೆ, ಈಗ ಒಟ್ಟು 4 ಹುಲಿಗಳ ಸೆರೆಗೆ ಅನುಮತಿ ಸಿಕ್ಕಿದ್ದಾಗ್ಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹುಲಿ ದಾಳಿ ನಡೆಸಿದ ಸ್ಥಳಕ್ಕೆ ತೆರಳಿದಾಗ ಹುಲಿ ವಾಪಸ್ ಆ ಸ್ಥಳಕ್ಕೆ ಬಾರದೇ ಕಾಡಿನೊಳಗೆ ಹೋಗುತ್ತಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡ ಪಿ.ಕೆ.ಪೊನ್ನಪ್ಪ ಭಾಗವಹಿಸಿದ್ದರು.

ಕಾಡಾನೆ ಓಡಿಸಲು ಸೂಚನೆ

ದಕ್ಷಿಣ ಕೊಡಗಿನಲ್ಲಿ ಹೆಚ್ಚಾಗಿರುವ ಕಾಡಾನೆ ಹಾವಳಿ ತಡೆಗೆ ಈಗಾಗಲೇ ಎಲ್ಲ ನಾಲ್ವರು ಡಿಸಿಎಫ್‌ಗಳೊಂದಿಗೆ ಸಭೆ ನಡೆಸಲಾಗಿದೆ. ಅರಣ್ಯ ಇಲಾಖೆಯಕ್ಷಿಪ್ರ ಕಾರ್ಯಾಚರಣೆ ಪಡೆ ಕಾರ್ಯಪಡೆ ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ಒಂದು ಗುಂಪು ಮಾಡಿ ವ್ಯಾಪಕವಾದ ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು. ಗುರುವಾರವೇ ಒಂದು ಕಾಡಾನೆ ಹಿಂಡನ್ನು ಕಾಡಿಗಟ್ಟಲಾಗಿದೆ. ಇನ್ನುಳಿದ ಕಾಡಾನೆಗಳನ್ನು ಕಾಡಿಗೆ ಓಡಿಸುವ ಬೃಹತ್ ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕಾಗಿ 26ಕ್ಕೂ ಅಧಿಕ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.