
ಮಡಿಕೇರಿ: ನಾಡಿನಲ್ಲೇ ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿ ದಸರೆಯ ವಿಜಯದಶಮಿಯ ರಾತ್ರಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮೊದಲು ಹೊರಡುವುದು ಇಲ್ಲಿನ ಐತಿಹಾಸಿಕ ಪೇಟೆ ಶ್ರೀರಾಮಮಂದಿರದ ಮಂಟಪ.
ಇಂದಿಗೂ ಈ ದೇಗುಲದ ಮಂಟಪವನ್ನು ಬಹುತೇಕ ಎಲ್ಲ ಹಿರಿಯರೂ ಮೆಚ್ಚಿಕೊಳ್ಳುತ್ತಾರೆ. ಶೋಭಾಯಾತ್ರೆಯ ದಿನ ಮಂಟಪದಲ್ಲಿ ಸಾಗುವ ದೇವರ ಕಲಾಕೃತಿಗೆ ಹಿರಿಯರು ಭಕ್ತಿಭಾವದಿಂದ ನಮಿಸುತ್ತಾರೆ.
ಮಂಟಪ ಕಲೆ ಹಾಗೂ ಸಂಸ್ಕೃತಿ ಉಳಿಸುವಿಕೆಯಲ್ಲಿ ಮುಂಚೂಣಿಯಲ್ಲಿರುವ ಪೇಟೆ ಶ್ರೀರಾಮ ಮಂದಿರದ ಮಂಟಪವು ಶೋಭಾಯಾತ್ರೆಯಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾಹಂದರವನ್ನಿಟ್ಟುಕೊಂಡು ಮಂಟಪ ರಚನೆಯಾಗುತ್ತಿದೆ.
ಇದರಲ್ಲಿ ಕೃಷ್ಣ, ಅರ್ಜುನ, ಋಷಿಮುನಿಗಳು ಸೇರಿದಂತೆ 7ರಿಂದ 8 ಕಲಾಕೃತಿಗಳು ಇರುತ್ತವೆ. ಸದ್ಯ, 2 ಟ್ರಾಕ್ಟರ್ನ್ನು ಬಳಕೆ ಮಾಡಲಾಗುತ್ತಿದೆ. ಕಲಾಕೃತಿಗಳು ಬೆಂಗಳೂರಿನಲ್ಲಿ ತಯಾರಾಗುತ್ತಿವೆ.
ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಪೇಟೆ ಶ್ರೀರಾಮಮಂದಿರ ಮಂಟಪ ಸಮಿತಿ ಅಧ್ಯಕ್ಷ ಶಿವಮೂರ್ತಿ, ‘ಪೇಟೆ ಶ್ರೀರಾಮಮಂದಿರಕ್ಕೆ ಸುಮಾರು 160 ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.
ಈ ಹಿಂದಿನ ವರ್ಷಗಳಲ್ಲಿ ಪ್ರದರ್ಶಿಸಲಾಗಿದ್ದ ‘ಶಿವದರ್ಶನ’, ‘ವೈಕುಂಠ ದರ್ಶನ’ ಹಾಗೂ ವಿಷ್ಣುವಿನ ಮತ್ಸ್ಯಾವತಾರ’ ಮಂಟಪವು ಜನಮನಸೂರೆಗೊಳ್ಳುವಲ್ಲಿ ಸಫಲವಾಗಿತ್ತು.
ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 2ನೇಯದಾಗಿ ಹೊರಡುವ ದೇಚೂರು ಶ್ರೀರಾಮಮಂದಿರವು ಈಗಾಗಲೇ 106 ವಸಂತಗಳನ್ನು ಪೂರೈಸಿ 107ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಬಾರಿ ‘ರಾಮಾಂಜನೇಯ ವೈಭವ’ ಎಂಬ ಕಥಾಹಂದರವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ದೇಗುಲದ ಸಮೀಪ ಭಜನಾ ಮಂದಿರದ ಪುನರ್ನಿರ್ಮಾಣ ಮಾಡುತ್ತಿರುವುದರಿಂದ ಅತಿಯಾದ ಆಡಂಬರ ಈ ಬಾರಿ ಇಲ್ಲ. ಆದರೂ, ಉತ್ತಮ ಕಲಾತ್ಮಕತೆಯಿಂದ ಕೂಡಿರುತ್ತದೆ. ಒಂದೇ ಟ್ರಾಕ್ಟರ್ನಲ್ಲಿ ಇಡೀ ಕಥೆಯನ್ನು ಹೇಳಲು ಸಿದ್ಧತೆ ನಡೆಸಲಾಗಿದೆ.
ಮೈಸೂರು ಸಮೀಪದ ಉದ್ಭೂರಿನಲ್ಲಿ 4 ಕಲಾಕೃತಿಗಳು ನಿರ್ಮಾಣವಾಗುತ್ತಿವೆ. ದಿಂಡಿಗಲ್ಲಿನ ಬೋರ್ಡ್ ಇದೆ ಎಂದು ಮಂಟಪ ಸಮಿತಿ ಅಧ್ಯಕ್ಷ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಹಿಂದೆ ಪ್ರದರ್ಶಿಸಿದ್ದ ‘ಮಧುಕೈಟಭರ ವಧಾ ಪ್ರಸಂಗ’ ಹಾಗೂ ಕಾಳಿಂಗ ಮರ್ಧನ’ವು ನೋಡುಗರಿಗೆ ರಸದೌತಣವನ್ನೇ ಬಡಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.