
ಮಡಿಕೇರಿ: ನಗರದ ಐತಿಹಾಸಿಕ ಕೋಟೆ ಆವರಣದ ಸ್ವಚ್ಛಗೊಂಡಿದೆ. ಸದಾ ಕಾಲ ಕಸದಿಂದ ಆವೃತವಾಗಿರುತ್ತಿದ್ದ ಆವರಣ ಇದೀಗ ಸಂಪೂರ್ಣ ಸ್ವಚ್ಛಗೊಂಡು, ಗಮನ ಸೆಳೆಯುತ್ತಿದೆ.
ಕೋಟೆ ಹೊರ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ. ಬಹುತೇಕ ಗಿಡಗಂಟಿಗಳು ಹಾಗೂ ಕಳೆ ಸಸ್ಯಗಳನ್ನು ತೆಗೆಯಲಾಗಿದೆ. ಇನ್ನುಳಿದ ಕಡೆದ ತೆರವುಗೊಳಿಸುವಿಕೆ ನಡೆದಿದೆ.
ಇಡೀ ಕೋಟೆಯ ಹೊರ ಆವರಣ ಮತ್ತು ಒಳ ಆವರಣವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ. ಹಾಗೆಯೇ ಕೋಟೆಯ ಮುಂಭಾಗ ಮಾಹಿತಿ ಫಲಕವನ್ನೂ ಹಾಕಲಾಗಿದೆ. ಆದರೆ, ಕೋಟೆಯೊಳಗೆ ಇಲಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ತಪ್ಪು ಮಾಹಿತಿಯುಳ್ಳ ಹಳೆಯ ಫಲಕ ಇನ್ನೂ ಹಾಗೆಯೇ ಇದೆ.
ಇದುವರೆಗೂ ಕೋಟೆಯ ಒಳ ಆವರಣದಲ್ಲಿ ಬಿದ್ದಿದ್ದ ಕಸಕಡ್ಡಿಗಳನ್ನು ಕಂಡು ಬರುವ ಪ್ರವಾಸಿಗರು ಮೂಗು ಮುಚ್ಚಿಕೊಳ್ಳುತ್ತಿದ್ದರು. ಕೋಟೆಯ ಮೇಲ್ಭಾಗ, ಹೊರ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಂಡು ಇಷ್ಟು ಐತಿಹಾಸಿಕವಾದ ಕೋಟೆಯನ್ನು ಈ ರೀತಿಯೇ ನಿರ್ವಹಣೆ ಮಾಡುವುದು ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.
ಈಚೆಗೆ ನವೆಂಬರ್ ತಿಂಗಳಿನಲ್ಲಿ ಪಾರಂಪರಿಕ ಸಪ್ತಾಹ ಕೋಟೆಯೊಳಗಿನ ಅರಮನೆಯಲ್ಲಿ ನಡೆದಾಗ ಕೋಟೆಯ ಹೊರ ಆವರಣದಲ್ಲಿ ಗಿಡಗಂಟಿಗಳಿಂದಲೆ ಕೂಡಿತ್ತು. ‘ಪ್ರಜಾವಾಣಿ’ ಈ ಕುರಿತು ‘ಪಾರಂಪರಿಕ ತಾಣ ನಿರ್ಲಕ್ಷ್ಯ’ ಎಂಬ ಸರಣಿ ವರದಿಗಳನ್ನು ಪ್ರಕಟಿಸಿತ್ತು. ‘ಕೋಟೆಗೆ ಬೇಕು ಜತನದ ರಕ್ಷೆ’ ಎಂಬ ಶೀರ್ಷಿಕೆಯಡಿ ನವೆಂಬರ್ 26ರಂದು ವಿಶೇಷ ವರದಿ ಪ್ರಕಟಗೊಂಡಿತ್ತು.
ಉದ್ಯಾನದ ಅಭಿವೃದ್ಧಿ
ಈಗ ಕೋಟೆಯ ಒಳ ಆವರಣ ಮತ್ತು ಅರಮನೆಯ ಮುಂಭಾಗ ತೋಟವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೂವಿನ ಗಿಡಗಳು ಹಸಿರು ಹುಲ್ಲು ಹಾಗೂ ಇತರೆ ಗಿಡಗಳನ್ನು ನೆಡಲಾಗಿದ್ದು ಅವುಗಳಿಗೆ ನಿತ್ಯವೂ ನೀರುಣಿಸಿ ನಿರ್ವಹಣೆ ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ಚೆಂದದೊಂದು ಪುಟ್ಟ ಉದ್ಯಾನವೇ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ತೋಟದೊಳಗೆ ಬ್ರಿಟಿಷರು ಹಾಕಿದ್ದ ಸಸಿಗಳು ಈಗ ಮರವಾಗಿದ್ದು ಅವುಗಳನ್ನೂ ರಕ್ಷಿಸಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.