ಪ್ರಾತಿನಿಧಿಕ ಚಿತ್ರ
ಮಡಿಕೇರಿ: ಕಳೆದ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಈಗ ಮತ್ತೆ ಚುರುಕಾಗಿದೆ. ಮಡಿಕೇರಿ ನಗರದಲ್ಲಿ ಮುಂಗಾರು ಶುಕ್ರವಾರ ಅಬ್ಬರಿಸಲಾರಂಭಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲ್ಲೂಕಿನ ಮದೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಸಂಜೆಯವರೆಗೆ 8 ಸೆಂ.ಮೀಗೂ ಅಧಿಕ ಮಳೆ ದಾಖಲಾಗಿತ್ತು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ಗುರುವಾರ ತಡರಾತ್ರಿಯಿಂದಲೇ ಮಳೆ ಮತ್ತು ಗಾಳಿ ಬಿರುಸಾಗಿತ್ತು. ಶುಕ್ರವಾರ ದಿನವಿಡೀ ಮಳೆ ಸುರಿಯಿತು. ಶೀತಗಾಳಿಯಿಂದ ಜನರು ಅಕ್ಷರಶಃ ನಡುಗಿದರು.
ಮಡಿಕೇರಿ ನಗರದಲ್ಲಿ ಶುಕ್ರವಾರ ಸಂತೆ ಇದ್ದುದ್ದರಿಂದ ಹಾಗೂ ರಜೆಯೂ ಇದ್ದುದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಗಾಗಿ ಬಂದಿದ್ದರು. ಆದರೆ, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಸಿಲುಕಿದ ಅವರು ಪರದಾಡಿದರು.
ಮಾರುಕಟ್ಟೆಯ ಸುತ್ತಮುತ್ತ ಹಾಗೂ ಮಹದೇವಪೇಟೆಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಶುಕ್ರವಾರ ರಾತ್ರಿಯಾದರೂ ಮಡಿಕೇರಿಯಲ್ಲಿ ಮಳೆ ಬಿರುಸಾಗಿಯೇ ಸುರಿಯುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.