ಗೋಣಿಕೊಪ್ಪಲು: ‘ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡವ ಯೋಧರ ಮೂರನೇ ಮಕ್ಕಳ ಮದುವೆಗೆ ಪೊನ್ನಂಪೇಟೆ ಕೊಡವ ಸಮಾಜ ಸಭಾ ಭವನವನ್ನು ಉಚಿತವಾಗಿ ನೀಡುವ ನಿರ್ಣಯ ಮುಂದುವರಿಸಲಾಗುವುದು’ ಎಂದು ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಹೇಳಿದರು.
ಸಮಾಜದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೊಡವ ಜನಾಂಗದ ಜನಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸುತ್ತಿದೆ. ಇದರಿಂದ ಸಂಸ್ಕೃತಿ ಮೇಲು ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಕೊಡವ ಜನಾಂಗದ ಜನಸಂಖ್ಯೆ ಹೆಚ್ಚಿಸಲು ಸೇನೆ ಮೂಲಕ ದೇಶ ಸೇವೆ ಮಾಡುತ್ತಿರುವ ಯೋಧರಿಗೆ ಮೂರನೆ ಮಗುವಾದರೆ ವಿವಾಹ ಸಮಾರಂಭಕ್ಕೆ ಕೊಡವ ಸಮಾಜ ಭವನ ಉಚಿತ’ ಎಂದು ತಿಳಿಸಿದರು.
‘ಉಳಿದಂತೆ ಸಮಾಜದಲ್ಲಿ ನಡೆಯುವ ಮದುವೆ ಮುಹೂರ್ತದ ಮಧ್ಯಾಹ್ನ ಮದ್ಯ ನಿಷೇಧಿರಿಸಿರುವುದು, ಕೊಡವ ಭಾಷೆ ಬೆಳೆಸಲು ಕೊಡವ ಪುಸ್ತಕ ಭಂಡಾರ ಸ್ಥಾಪಿಸಿರುವುದು, ಕೊಡವ ಕಲೆ ಸಂಸ್ಕೃತಿ ಬೆಳೆಸಲು ಕೊಡವ ಪಡಿಪು ಯೋಜನೆ ಕೈಗೊಂಡಿರುವುದನ್ನು ಮುಂದುವರಿಸಲಾಗುವುದು’ ಎಂದು ಹೇಳಿದರು.
‘ಸಮಾಜದ ಸದಸ್ಯರ ಮಕ್ಕಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ99.84 ಅಂಕ ಪಡೆದ ಕಾಟಿಮಾಡ ಭಾಷಿತಾ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 98.5 ಅಂಕ ಪಡೆದ ಚೆಪ್ಪುಡೀರ ಹರ್ಷಿನಿ ಪ್ರದೀಪ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 97.5 ಅಂಕ ಪಡೆದ ಪೆಮ್ಮಂಡ ಸುಕಿ ನಾಚಪ್ಪ ಅವರಿಗೆ ಪ್ರೋತ್ಸಾಹಕರ ಬಹುಮಾನ ನೀಡಿ ಗೌರವಿಸಲಾಯಿತು.
ಸಮಾಜದ ಅಂಗಸಂಸ್ಥೆಯಾದ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಏಳರಿಂದ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ನ್ಯಾಯ ಪೀಠದ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ, ಅಪ್ಪಚ್ಚ ಕವಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸೋಮಯ್ಯ, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ ನಿರ್ದೇಶಕ ಮೂಕಳಮಾಡ ಅರಸು ನಂಜಪ್ಪ, ಅಡ್ಡಂಡ ಸುನಿಲ್ ಸೋಮಯ್ಯ, ಕೊಣಿಯಂಡ ಸಂಜು ಸೋಮಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಖಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.