ಮಡಿಕೇರಿ: ಅಮೆರಿಕದ ‘ಸ್ಕೋಪ್’ ಫೌಂಡೇಶನ್ ಕೊಡಗು ಹಾಗೂ ಮಂಡ್ಯದ ಜಿಲ್ಲೆಯ ಆಸ್ಪತ್ರೆಗಳಿಗೆ, ವೈದ್ಯಕೀಯ ನೆರವು ನೀಡಿದ್ದು, ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ₹ 70 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿಗಳು ಭಾನುವಾರ ಮಧ್ಯಾಹ್ನ ತಲುಪಿದವು.
ಫೌಂಡೇಶನ್ ಪರವಾಗಿ ಹೈಕೋರ್ಟ್ ವಕೀಲರೂ ಆಗಿರುವ ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಅವರು ಈ ಉಪಕರಣಗಳನ್ನು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಹಸ್ತಾಂತರಿಸಿದರು.
ಡಾ.ಹಲ್ಲಗೆರೆ ನರಸಿಂಹಮೂರ್ತಿ ಅವರ ಪುತ್ರ ಡಾ.ವಿವೇಕ್ ಮೂರ್ತಿ ಅವರು ಅಮೆರಿಕದ ಆರೋಗ್ಯ ಸಚಿವಾಲಯದಲ್ಲಿ ಸರ್ಜನ್ ಜನರಲ್. ಅವರು ಅಮೆರಿಕದ ಸ್ಕೋಪ್ ಫೌಂಡೇಶನ್ ಮೂಲಕ ಕೊಡಗಿಗೆ ವೈದ್ಯಕೀಯ ಸಲಕರಣೆಗಳ ನೆರವು ನೀಡಿದ್ದಾರೆ.
ಎಚ್.ಎಸ್.ಚಂದ್ರಮೌಳಿ ಅವರ ಕೋರಿಕೆಯ ಮೇರೆಗೆ ಸ್ಕೋಪ್ ಫೌಂಡೇಶನ್ ಮೂಲಕ ಉಪಕರಣದ ನೆರವು ನೀಡಲಾಗಿದೆ. ಕಳೆದ ವಾರ ವಿಮಾನದ ಮೂಲಕ ಬೆಂಗಳೂರಿಗೆ ವೈದ್ಯಕೀಯ ಉಪಕರಣಗಳು ತಲುಪಿದ್ದವು. ನಾಲ್ಕು ದಿನಗಳ ಹಿಂದೆ, ಮಂಡ್ಯ ಆಸ್ಪತ್ರೆಗೂ ಉಪಕರಣ ಹಸ್ತಾಂತರ ಮಾಡಲಾಗಿತ್ತು.
ಏನೇನು ಉಪಕರಣ?: 95 ಸಾವಿರ ಎನ್ 95 ಮಾಸ್ಕ್, 5 ಲೀಟರ್ ಸಾಮರ್ಥ್ಯದ 15 ಆಮ್ಲಜನಕ ಕಾನ್ಸ್ಟ್ರೇಟರ್ಗಳು, 12 ಸಾವಿರ ತ್ರಿಲೇಯರ್ ಮಾಸ್ಕ್, 6,200 ಫೇಸ್ಶೀಲ್ಡ್ಗಳು, 25 ಥರ್ಮೋಮೀಟರ್, 25 ಟ್ಯೂಬ್ ಸ್ಪೆಪ್ಡೌನ್ ಟ್ರಾನ್ಸ್ಫರ್, 50 ವೈಪ್ಸ್ ಸೇರಿದಂತೆ 1,800 ಕೆ.ಜಿ ತೂಕವಿದ್ದ ವೈದ್ಯಕೀಯ ಉಪಕರಣಗಳನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.
ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ‘ಡಾ.ನರಸಿಂಹಮೂರ್ತಿ ಅವರು ನನ್ನ ಸ್ನೇಹಿತರು. ಸಂಕಷ್ಟ ಸಂದರ್ಭದಲ್ಲಿ ನೆರವು ಕೋರಿದ್ದೆ. ಕೋವಿಡ್ ಮೂರನೇ ಅಲೆ, ತಡೆಯುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು, ನೆರವನ್ನು ಶ್ಲಾಘಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರ ಮಾತನಾಡಿ, ಸ್ಕೋಪ್ ಪೌಂಡೇಶನ್ ನ ನೆರವನ್ನು ಶ್ಲಾಘಿಸಿದರು.
ಕಾಯ೯ಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾರ್ಯಪ್ಪ, ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಆಡಳಿತಾಧಿಕಾರಿ ನಂಜುಂಡೇಗೌಡ, ಡಾ.ಮಂಜುನಾಥ್, ಡಾ.ರೂಪೇಶ್, ಡಾ.ಉದಯಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಾಟಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.