
ಕುಶಾಲನಗರ: ಕೊಡಗಿನ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ₹123 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಎಡದಂಡೆ ನಾಲೆಯ ಮುಖ್ಯ ನಾಲಾ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಗೆ ಭಾನುವಾರ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಹಾರಂಗಿ ನೀರಾವರಿ ಇಲಾಖೆಯಿಂದ ತೊರೆನೂರು ಗ್ರಾಮದ ನೀರುಬಳಕೆದಾರರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಹಾರಂಗಿ ಎಡದಂಡೆ ನಾಲೆ ಮುಖ್ಯ ನಾಲಾ ಸರಪಳಿ 6.875ರಿಂದ 14.750 ಕಿ.ಮೀ ವರೆಗಿನ ಆಧುನೀಕರಣ ಕಾಮಗಾರಿ ಹಾಗೂ ಹಾರಂಗಿ ಎಡದಂಡೆ ನಾಲೆಯ ವಿರತಣಾ ನಾಲೆ 1ರಿಂದ 18ರವರೆಗೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಮಂತರ್ ಗೌಡ, ಅಭಿವೃದ್ಧಿಗೆ ಒತ್ತು ನೀಡಿ ಜಲಾಶಯದ 42 ಕಿ.ಮೀ. ನಾಲೆ ಹಾಗೂ 18 ವಿತರಣಾ ನಾಲೆ ಅಭಿವೃದ್ಧಿಗೆ ಜೊತೆಗೆ ಹೇಮಾವತಿ ಜಲಾಶಯ ವ್ಯಾಪ್ತಿಯ ಕೊಡ್ಲಿಪೇಟೆ ಭಾಗದಲ್ಲಿ ನೂತನ 8 ಸೇತುವೆ ಕಾಮಗಾರಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ನೀರಾವರಿ ಇಲಾಖೆಯ ಅನುದಾನದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಸಾಲುಕೊಪ್ಪಲು, ಚಿಕ್ಲಿಹೊಳೆ, ಕುಶಾಲನಗರ ಭಾಗಕ್ಕೆ ತಲಾ ₹5 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ ಎಂದರು
ಕೆಪಿಸಿಸಿ ವಕ್ತಾರ ಲಕ್ಷ್ಮಣ ಮಾತನಾಡಿ, ಸರ್ಕಾರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈಗಾಗಲೇ 56 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ. 96 ಸಾವಿರ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. 57 ಸಾವಿರ ಹುದ್ದೆ ಭರ್ತಿಗೆ ನೋಟಿಫಿಕೇಶನ್ ಮಾಡಲಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಸತೀಶ್, ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಎಂಜಿಯರ್ ಕಿರಣ್, ಸೌಮ್ಯ, ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ಶಿರಂಗಾಲ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶ್ರೀಧರ್, ತೊರೆನೂರು ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ, ಹೆಬ್ಬಾಲೆ ಸಂಘದ ಅಧ್ಯಕ್ಷ ರವಿ, ಮುಖಂಡರಾದ ಎಚ್.ಕೆ.ನಟೇಶ್ ಗೌಡ, ಟಿ.ಬಿ.ಜಗದೀಶ್, ಎಚ್.ಎಸ್.ರಾಜಶೇಖರ್, ಮಂಜುನಾಥ್, ಶ್ರೀಕಾಂತ್, ಶಿರಂಗಾಲ ಬಸವರಾಜು, ಕೃಷ್ಣೇಗೌಡ, ರಮೇಶ್, ಎಸ್.ಎಸ್.ಚಂದ್ರಶೇಖರ್, ಅಳುವಾರ ಮೂರ್ತಿ,
ಟಿ.ಕೆ.ವಸಂತ, ನಿಂಗಜಮ್ಮ, ಸಾವಿತ್ರಿ, ಶಿರಂಗಾಲ ಲತಾಬಾಯಿ, ಸಂಜೀವಯ್ಯ, ದೇವರಾಜ್, ಟಿ.ಎಸ್.ಚಂದ್ರಶೇಖರ್, ಪುಟ್ಟರಾಜ, ರಾಧ, ಪಿ.ಡಿ.ರವಿಕುಮಾರ್, ರವಿಚಂದ್ರ ಪಾಲ್ಗೊಂಡಿದ್ದರು.
ಹುದುಗೂರು ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಮುಖಂಡರಾದ ಕೆ.ಪಿ.ಚಂದ್ರಕಲಾ, ಉಮಾ ಪ್ರಭಾಕರ್, ಮುಸ್ತಫಾ, ಸುಬ್ಬಯ್ಯ, ಪ್ರೇಮಾಲೀಲಾ, ಶೋಭಾಕುಟ್ಟಪ್ಪ, ಟಿ.ಪಿ.ಹಮೀದ್, ಅನಂತ್ ಕುಮಾರ್, ರವಿ, ಚಾಮಿ, ಐಮುಂಡಿಯಂಡ ಗಣೇಶ್, ಗೋವಿಂದಪ್ಪ, ಜಿ.ಆರ್.ಪುಷ್ಪಲತಾ ಇದ್ದರು.
‘ಗಡಿಗ್ರಾಮಗಳ ಅಭಿವೃದ್ಧಿಗೆ ಒತ್ತು’
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ಕೊಡಗಿನ ಗಡಿಗ್ರಾಮಗಳ ಹೆಬ್ಬಾಲೆ ತೊರೆನೂರು ಶಿರಂಗಾಲ ಭಾಗದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶಿರಂಗಾಲ ಕೋಟೆ ರಸ್ತೆಗೆ ₹25 ಲಕ್ಷ ಅನುದಾನ ನೀಡಲಾಗಿದೆ. ಹೆಬ್ಬಾಲೆ ಹೋಬಳಿ ಕೇಂದ್ರ ಮಾಡಿ ಚೆಸ್ಕ್ಂ ಶಾಖಾ ಕಚೇರಿ ತೆರಯಬೇಕು. ಸಿದ್ದಲಿಂಗಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಹೆಬ್ಬಾಲೆ ಗ್ರಾಮದಲ್ಲಿ ₹20 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜಾಗ ಕಾಯ್ದಿರಿಸಲಾಗಿದೆ. ಕೊಡಗು ವಿ.ವಿಗೆ ಗೋಪುರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಶಾಸಕರ ಅವಧಿಯಲ್ಲಿ ಆಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.