
ನಾಪೋಕ್ಲು: ಭಗವಂತ ಸುಂದರವಾದ ಭೂಮಿಯಲ್ಲಿ ಸ್ವರ್ಗ ನೀಡಿದ್ದಾನೆ, ಆದರೆ ಅದನ್ನು ನರಕ ಮಾಡಿಕೊಳ್ಳಬಾರದು ಎಂದು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೃಷ್ಣ ಚೈತನ್ಯ ಹೇಳಿದರು.
ಹಾಕತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ಸಂಘದ ಚಟುವಟಿಕೆಯ ಅಂಗವಾಗಿ, ಶಾಲೆಯ ವಿದ್ಯಾರ್ಥಿಗಳಿಗೆ ಪಕ್ಷಿ ಸಂಕುಲದ ಬಗ್ಗೆ ಉಪನ್ಯಾಸ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಪರಿಸರ ಸುರಕ್ಷಿತವಾಗಿ ನಮಗೆ ಮತ್ತು ನಮ್ಮ ಪೀಳಿಗೆಗೆ ಉಳಿಯಬೇಕಾದರೆ ಪಕ್ಷಿ ಸಂಕುಲವನ್ನು ಸುಸ್ಥಿತಿಯಲ್ಲಿ ಉಳಿಸಬೇಕು ಎಂದರು.
ಪಕ್ಷಿಗಳ ವಿಡಿಯೊ ಪ್ರದರ್ಶಿಸಿ ಪಕ್ಷಿಗಳ ಆಹಾರ, ವಿಹಾರ, ಗೂಡು ಕಟ್ಟುವಿಕೆ, ಮೊಟ್ಟೆ ಇಡುವಿಕೆ, ಅವುಗಳ ಬದುಕು, ಪರಿಸರಕ್ಕೆ ಅವುಗಳಿಂದ ಆಗುವ ಪ್ರಯೋಜನ, ಅವುಗಳ ಜೀವಿತಾವಧಿ... ಹೀಗೆ ಇನ್ನಿತರ ಉಪಯುಕ್ತ ವಿಷಯಗಳನ್ನು ವಿವರಿಸಿದರು.
ಪಕ್ಷಿಗಳ ಜೀವನ ಶೈಲಿ, ಅವುಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಹಾಗೆಯೇ ಕಾಡು ಬೆಳೆಸುವಲ್ಲಿ ಪಕ್ಷಿಗಳ ಪಾತ್ರ, ಮಾನವನಿಗೆ ಅವುಗಳಿಂದ ಆಗುವ ಪ್ರಯೋಜನಗಳನ್ನು ವಿವರಿಸಿ ಪಕ್ಷಿಗಳ ಸಂರಕ್ಷಣೆಯ ಕುರಿತು ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು.
ಶಾಲಾ ಮುಖ್ಯ ಶಿಕ್ಷಕ - ಕುಮಾರಸ್ವಾಮಿ ಟಿ. ಬಿ. ಹಾಗೂ ಶಿಕ್ಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.