ADVERTISEMENT

ಕಾರ್ಮಿಕರಿಗೆ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 13:00 IST
Last Updated 18 ಜುಲೈ 2019, 13:00 IST

ಮಡಿಕೇರಿ: ‘ಕೊಡಗಿನಲ್ಲಿ ಕಾಫಿ ತೋಟದ ಮಾಲೀಕರು, ಆದಿವಾಸಿಗಳಿಗೆ ಸಾಲ ನೀಡಿ ಅವರನ್ನು ಜೀತದ ಆಳುಗಳಂತೆ ದುಡಿಸಿಕೊಳ್ಳುತ್ತಿದ್ದು ಅವರ ವಿರುದ್ಧ ಕ್ರಮ ಆಗಬೇಕು’ ಎಂದು ಜಿಲ್ಲಾ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಗ್ರಹಿಸಿದೆ.

‌ನಗರದಲ್ಲಿ ಗುರುವಾರಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ವೈ.ಕೆ.ಗಣೇಶ್‌ ಮಾತನಾಡಿ, ‘ತೋಟದ ಕಾರ್ಮಿಕರಿಗೆ ಮಾಲೀಕರು ಸಾಲ ಕೊಡುವುದು ಮತ್ತು ಕಾರ್ಮಿಕರು ನಿಯಮಿತವಾಗಿ ಸಾಲ ಮರುಪಾವತಿ ಮಾಡುವುದು ರೂಢಿ. ಆದರೆ, ಈಚೆಗೆಕೆಲವು ಮಾಲೀಕರು ಸಾಲ ಮರುಪಾವತಿ ಆಗದಿದ್ದರೆ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ’ ಎಂದು ನೋವು ತೋಡಿಸಿಕೊಂಡರು.

‘ಎರವರು, ಕುರುಬರು, ಪಾಣಿಯರು ಮೊದಲಾದ ಬುಡಕಟ್ಟು ಜನಾಂಗದವರು ವಿದ್ಯೆ ಇಲ್ಲದೇ, ಸ್ವಂತ ಭೂಮಿ, ಮೂಲಸೌಲಭ್ಯಗಳಿಲ್ಲದೇ ಮಾಲೀಕರ ನೀಡುವ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಾರೆ. ಕನಿಷ್ಠ ಸಂಬಳಕ್ಕೆ ಹೆಚ್ಚು ದುಡಿಸಿಕೊಳ್ಳುವುದು, ಅವರು ಕೊಟ್ಟ ಹಣವನ್ನು ಪಡೆದುಕೊಂಡು ಅವರ ಸಾಲತೀರಿಸಲು ಆಗದ ಪರಿಸ್ಥಿತಿಯಲ್ಲಿ ಕಾರ್ಮಿಕರು ಇರುತ್ತಾರೆ. ಇಂತಹ ಕಾರ್ಮಿಕರಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ವತಿಯಿಂದ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕಾರ್ಮಿಕರನ್ನು ಶೋಷಣೆ ಮಾಡುವ ಮಾಲೀಕರ ನಡುವೆ ಉತ್ತಮ ಸೌಲಭ್ಯಗಳನ್ನು ನೀಡುವ ಮಾಲೀಕರು ಜಿಲ್ಲೆಯಲ್ಲಿದ್ದಾರೆ. ಇವರ ಬಗ್ಗೆ ನಮ್ಮ ವಿರೋಧವಿಲ್ಲ. ಕೆಲವು ಮೇಲ್ಜಾತಿಯೆಂದು ಹೇಳಿಕೊಳ್ಳುವ ಮಾಲೀಕರು, ಶೋಷಿಸುತ್ತಾನಮ್ಮ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇನ್ನು ಕಾನೂನಿನಂತೆ ಕನಿಷ್ಠ ಸಂಬಳ ₹ 324 ಹಾಗೂ 4 ಎಕರೆಗಿಂತ ಹೆಚ್ಚು ತೋಟಗಳಿರುವ ಮಾಲೀಕರು ಎಲ್ಲ ಮೂಲ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಬೇಕಿದೆ. ಆದರೆ, ಈ ರೀತಿಯ ಸೌಲಭ್ಯಗಳಿಲ್ಲದೇ ಕಾರ್ಮಿಕರನ್ನು ಮಾಲೀಕರು ವಂಚಿಸುತ್ತಿದ್ದಾರೆ’ ಎಂದು ದೂರಿದರು.

ಸಮಿತಿ ಅಧ್ಯಕ್ಷ ವೈ.ಎ.ರವಿ ಮಾತನಾಡಿ, ತೋಟದ ಯಜಮಾನರು ಕಾರ್ಮಿಕರನ್ನು ಮನುಷ್ಯರಂತೆಕಾಣುವ ಹವ್ಯಾಸ ಬೆಳೆಸಿಕೊಳ್ಳಿ. ಸಾಲನೀಡಿ ಸಾಲದ ಲೆಕ್ಕದಲ್ಲಿ ಹೆಚ್ಚಿನ ಮೊತ್ತ ತೋರಿಸಿ ಕಾರ್ಮಿಕರನ್ನು ವಂಚಿಸುವ ಕೆಲಸ ಮಾಲೀಕರು ಮಾಡಬಾರದು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.