ADVERTISEMENT

ದುಬಾರೆ ಶಿಬಿರ: ಹೆಜ್ಜೇನು ದಾಳಿ; ಕೊನೆಗೂ ಬದುಕಲಿಲ್ಲ ಸಾಕಾನೆ ‘ಕಾರ್ತಿಕ್’

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 12:57 IST
Last Updated 31 ಜನವರಿ 2019, 12:57 IST
ಕುಶಾಲನಗರ ಸಮೀಪದ ದುಬಾರೆಯಲ್ಲಿ ಹೆಜ್ಜೇನು ದಾಳಿಯಿಂದ ಮೃತಪಟ್ಟಿದ್ದ ಸಾಕಾನೆ ‘ಕಾರ್ತಿಕ್‌’ 
ಕುಶಾಲನಗರ ಸಮೀಪದ ದುಬಾರೆಯಲ್ಲಿ ಹೆಜ್ಜೇನು ದಾಳಿಯಿಂದ ಮೃತಪಟ್ಟಿದ್ದ ಸಾಕಾನೆ ‘ಕಾರ್ತಿಕ್‌’    

ಕುಶಾಲನಗರ: ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಇಬ್ಬರನ್ನು ಕೊಂದುಹಾಕಿದ್ದ ‘ಕಾರ್ತಿಕ್‌’ ಹೆಸರಿನ ಸಾಕಾನೆ ಮೃತಪಟ್ಟಿದೆ.

ಕೆಲವು ದಿನಗಳ ಹಿಂದೆ ಹೆಜ್ಜೇನು ದಾಳಿಗೆ ಒಳಗಾಗಿ ಅಸ್ವಸ್ಥಗೊಂಡಿತ್ತು. ಹೆಜ್ಜೇನು ಕಡಿತದಿಂದ ಹೊಟ್ಟೆ ಹಾಗೂ ಹಿಂಬದಿಯಲ್ಲಿ ಸೋಂಕಾಗಿ ಮಲವಿಸರ್ಜನೆ ಸಾಧ್ಯವಾಗದೇ ನರಳುತ್ತಿತ್ತು.

ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ಅವರು ಆನೆ ಮರಣೋತ್ತರ ಪರೀಕ್ಷೆ ನಡೆಸಿದರು. ಅರಣ್ಯ ಸಿಬ್ಬಂದಿ ಹಾಗೂ ಮಾವುತರು, ಕಾವಾಡಿಗಳು ದುಬಾರೆ ಅರಣ್ಯದಲ್ಲಿ ಕಾರ್ತಿಕ್‌ ಕಳೇಬರವನ್ನು ಸುಟ್ಟು ಹಾಕುವ ಮೂಲಕ ಅಂತಿಮ ಕ್ರಿಯೆ ನಡೆಸಲಾಗಿದೆ.

ADVERTISEMENT

ಜ.13ರಂದು ಮಾವುತ ನವೀನ್ ಮೇಲೆ ದಾಳಿ ಮಾಡಿದ್ದ ಕಾರಣ ಆನೆಯನ್ನು ಕಾಡಂಚಿನಲ್ಲಿ ಪ್ರತ್ಯೇಕವಾಗಿ ಕಟ್ಟಿ ಹಾಕಲಾಗಿತ್ತು. ಆಹಾರ, ನೀರನ್ನು ಅಲ್ಲಿಗೇ ಪೂರೈಸಲಾಗುತ್ತಿತ್ತು.ಸರಪಳಿಯಿಂದ ಬಂಧಿಸಿದ್ದ ವೇಳೆ ಹೆಜ್ಜೇನುಗಳು ದಾಳಿ ಮಾಡಿದ್ದವು. ಗಾಯ ತೀವ್ರ ಸ್ವರೂಪ ಪಡೆದು ಚಿಕಿತ್ಸೆಗೂ ಸ್ಪಂದಿಸದೇ ಮೃತಪಟ್ಟಿದೆ.

ಸಾಕಾನೆ ಶಿಬಿರದ ವಿಜಯ ಎಂಬ ಹೆಣ್ಣಾನೆಯ ‘ಪುತ್ರನೇ ಕಾರ್ತಿಕ್’ (9 ವರ್ಷ) ಕಳೆದ ವರ್ಷ ಮಾವುತ ಅಣ್ಣು ಹಾಗೂ ಮಣಿ ಅವರನ್ನೂ ದಂತದಿಂದ ತಿವಿದು ಸಾಯಿಸಿತ್ತು. ಅಲ್ಲದೇ ಕಾರ್ಮಿಕ ಚಂದ್ರು ಹಾಗೂ ನವೀನ್ ಅವರ ಮೇಲೂ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು.

ಇದರಿಂದ ಸಾಕಾನೆ ಶಿಬಿರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಕಾರ್ತಿಕ್ ಆನೆಯ ಚಲನವಲನ ಕೂಡ ಭಿನ್ನವಾಗಿತ್ತು. ಸಾಕಾನೆ ನಡೆವಳಿಕೆಯಿಂದ ಹೆದರಿದ ಮಾವುತರು ಹಾಗೂ ಕಾವಾಡಿಗಳು ಆನೆಯ ನಿರ್ವಹಣೆಗೆ ಹಿಂದೇಟು ಹಾಕಿದ್ದರು. ಇದರಿಂದ ಅರಣ್ಯಾಧಿಕಾರಿಗಳಿಗೆ ‘ಕಾರ್ತಿಕ್‌’ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ. ಹೆಜ್ಜೇನು ದಾಳಿಯಿಂದ ಅನಾರೋಗ್ಯಕ್ಕೆ ತುತ್ತಾದ ಬಳಿಕ ‘ಕಾರ್ತಿಕ್‌’ ಮೆತ್ತಗಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.