ಶನಿವಾರಸಂತೆ: ಬಾಣಾವರ ಮೀಸಲು ಅರಣ್ಯದಲ್ಲಿ ತಿಂಗಳ ಹಿಂದೆ ಎಡಗಾಲಿಗೆ ಗಾಯಗೊಂಡು ಅಸ್ವಸ್ಥಗೊಂಡಿದ್ದ ಒಂಟಿ ಸಲಗ ಗುರುವಾರ ಸಾವನ್ನಪ್ಪಿದೆ.
ಕಾಲಿಗೆ ಗಾಯವಾಗಿ ಒಂಟಿ ಸಲಗ ನೋಡಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಪಶುವೈದ್ಯರ ಸಲಹೆ ಪಡೆದು ಸಾಕಾನೆಗಳ ಸಹಕಾರದಿಂದ ಬಂಧಿಸಿ ಚಿಕಿತ್ಸೆಗೆ ಒಳಪಡಿಸಿದ್ದರು.
ಪಶುವೈದ್ಯಾಧಿಕಾರಿ ಡಾ.ಮುಜೀದ್ ಹಾಗೂ ಸಿಬ್ಬಂದಿ ನೀಡಿದ್ದ ಆಹಾರ ಮತ್ತು ಚಿಕಿತ್ಸೆಯಿಂದ ಸಲಗ ಸುಧಾರಿಸಿಕೊಂಡಿತ್ತು. ಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಸಕ್ರೆ ಬೈಲಿನ ಆನೆ ಶಿಬಿರಕ್ಕೆ ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆದಿತ್ತು.
ಗುರುವಾರ ಎಂದಿನಂತೆ, ಆಹಾರ ನೀಡಲು ಸಿಬ್ಬಂದಿ ತೆರಳಿದ್ದ ಸಂದರ್ಭ ಆನೆ ಸಾವನ್ನಪ್ಪಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬಂದ ಬಳಿಕವೇ ಸಾವಿನ ಕಾರಣ ತಿಳಿದುಬರಲಿದೆ. ಸಮೀಪದ ಕಾಡಿನಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.
ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಬಾಣಾವರ ಉಪ ವಲಯ ಅರಣ್ಯಾಧಿಕಾರಿ ಮಹಾದೇವನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.