ADVERTISEMENT

ಮಡಿಕೇರಿ: ಸಂತ್ರಸ್ತರಿಗೆ ₹ 5 ಲಕ್ಷ ವೆಚ್ಚದಲ್ಲಿ 50 ಮನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 14:19 IST
Last Updated 14 ಡಿಸೆಂಬರ್ 2018, 14:19 IST
ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಿದ ರೋಟರಿ ಸದಸ್ಯರು
ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಿದ ರೋಟರಿ ಸದಸ್ಯರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರತಿ ಸಂತ್ರಸ್ತರಿಗೆ ₹5 ಲಕ್ಷ ವೆಚ್ಚದಲ್ಲಿ ಒಟ್ಟು 50 ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ರೋಟರಿ ಜಿಲ್ಲೆ–3181ರ ಗವರ್ನರ್‌ ರೋಹಿನಾಥ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಸ್ಥೆಯ ವತಿಯಿಂದ ಮೊದಲ ಹಂತವಾಗಿ 25 ಮನೆಗಳನ್ನು ನಿರ್ಮಿಸಲಾಗುವುದು. ಈ ಬಗ್ಗೆ ಜಾಗ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಜೂನ್‌ ಅಂತ್ಯದ ಒಳಗೆ ಮನೆಗಳನ್ನು ಸಂತ್ರಸ್ತರಿಗೆ ನೀಡಲಾಗುವುದು’ ಎಂದು ವಿವರಿಸಿದರು.

ಸಂತ್ರಸ್ತರ ಕುಟುಂಬಗಳನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಮೂಲ ಸೌಲಭ್ಯ ಕೊರತೆಯಿರುವ ಅಂಗನವಾಡಿಗಳನ್ನು ‘ಆಶಾ ಸ್ಫೂರ್ತಿ’ ಯೋಜನೆ ಅಡಿ ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದರು.

ADVERTISEMENT

‘ರೋಟರಿ ಜಿಲ್ಲೆ– 3181ರ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿವೆ. ಬಹುತೇಕ ಕೇಂದ್ರಗಳು ಸೌಲಭ್ಯದ ಕೊರತೆ ಎದುರಿಸುತ್ತಿವೆ. ಪುಸ್ತಕ, ಪೀಠೋಪಕರಣ, ಕಟ್ಟಡ ನಿರ್ವಹಣೆ, ಸುಣ್ಣ–ಬಣ್ಣ... ಹೀಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಹೇಳಿದರು.

ಉಪ ಗವರ್ನರ್ ಧರ್ಮಪುರ ನಾರಾಯಣ, ಮಡಿಕೇರಿ ರೋಟರಿ ಅಧ್ಯಕ್ಷ ಒ.ಎಸ್‌. ಚಿಂಗಪ್ಪ, ಕಾರ್ಯದರ್ಶಿ ಮೃಣಾಲಿನಿ ಚಿಂಗಪ್ಪ, ಎನ್‌.ಪಿ.ಚಿಯಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.