ಮಡಿಕೇರಿ: ನಗರಸಭೆಯ ಬೀದಿಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ (ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿ) ಡಿ.21ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಕಾವೇರಿ ಕಲಾಕ್ಷೇತ್ರ ನಗರಸಭೆ ಆವರಣದಲ್ಲಿ ಚುನಾವಣೆ ನಡೆಯಲಿದೆ.
ಡಿ.14ರಂದು 10 ಸ್ಥಾನಕ್ಕೆ 11 ಮಂದಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 1 ಸ್ಥಾನಕ್ಕೆ ಇತರೆ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಂದ ಇಬ್ಬರು ಕಣದಲ್ಲಿದ್ದಾರೆ. ಹೀಗಾಗಿ, ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಅವಿರೋಧ ಆಯ್ಕೆಯಾದವರು: ಮಹಿಳಾ ಪ್ರತಿನಿಧಿಯ 3 ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜೆ.ಉಮಾ, ವಿ.ಎಂ.ಸುಮಿತ್ರಾ, ಶಾಂತಕುಮಾರಿ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ವಿ.ಟಿ.ಲೋಕೇಶ್, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಎಚ್.ಎನ್.ಕುಮಾರಿ, ಅಲ್ಪಸಂಖ್ಯಾತರ ಪ್ರತಿನಿಧಿ ಅಬ್ದುಲ್ ರಹೀಂ, ಅಂಗವಿಕಲ ಪ್ರತಿನಿಧಿಯಾಗಿ ಇಸ್ಮಾಯಿಲ್ ಮತ್ತು ಸಾಮಾನ್ಯ ಪ್ರತಿನಿಧಿಯಾಗಿ ಕೆ.ಬಿ.ಮೋಹನ್ ರಾಜ್, ಎಂ.ವೈ.ಸುಲೈಮಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಅವಿರೋಧ ಆಯ್ಕೆ ಘೋಷಣೆ ಮಾತ್ರ ಬಾಕಿಯಿದೆ. ಇತರೆ ಹಿಂದುಳಿದ ವರ್ಗಗಳ ಪ್ರತಿನಿಧಿ 2 ಸ್ಥಾನಕ್ಕೆ ಪುಟ್ಟೋಜಿರಾವ್, ಎಚ್.ಕೆ.ರಾಜು ಸ್ಪರ್ಧಿಗಳಾಗಿದ್ದಾರೆ.
ಬೆಂಗಳೂರು ಆಯುಕ್ತರು ಸಹಕಾರ ಚುನಾವಣಾ ಪ್ರಾಧಿಕಾರ ಆದೇಶದಂತೆ ಡಿ.9ರಿಂದ 13ರವರೆಗೆ ನಾಮಪತ್ರ ಸಲ್ಲಿಸಿ, 14ರಂದು ನಾಮಪತ್ರ ಪರಿಶೀಲಿಸಲಾಗಿದ್ದು, 21ರಂದು ಸಂಜೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.