ಸುಂಟಿಕೊಪ್ಪ: ಸುಂಟಿಕೊಪ್ಪ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಸಡಗರ ಸಂಭ್ರಮದಿಂದ ಓಣಂ ಹಬ್ಬವನ್ನು ಆಚರಿಸಲಾಯಿತು.
ಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ಮುಂಜಾನೆ ಬೇಗನೇ ಎದ್ದು ಮನೆಯ ಆವರಣವನ್ನು ಶುಚಿಗೊಳಿಸಿ ಬಣ್ಣಬಣ್ಣದ ಹೂವಿನ ರಂಗೋಲಿ (ಪೂಕಳಂ) ಹಾಕಿ ಅದರ ಮಧ್ಯೆ ದೀಪವನ್ನು ಬೆಳಗಿಸಿ ಹಬ್ಬಕ್ಕೆ ಕಳೆ ತುಂಬಿದರು. ಸಾಂಪ್ರಾದಾಯಿಕ ಉಡುಗೆ ತೊಟ್ಟ ಮಹಿಳೆಯರು, ಪುರುಷರು ಮತ್ತು ಮಕ್ಕಳು ಮುತ್ತಪ್ಪ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪೈಂಗುತ್ತಿ ಸೇವೆಯನ್ನು ಮಾಡಿಸಿದರು. ಅಲ್ಲದೇ ಚಾಮುಂಡೇಶ್ವರಿ, ಅಯ್ಯಪ್ಪ ದೇವಾಲಯದಲ್ಲೂ ವಿಶೇಷ ಪೂಜೆ ಮಾಡಿಸಿ ಹಬ್ಬದ ಸಂತೋಷವನ್ನು ಹಂಚಿಕೊಂಡರು.
ನಂತರ ಮಧ್ಯಾಹ್ನ ಮನೆ ಮಂದಿ, ನೆಂಟರಿಷ್ಟರು ಒಟ್ಟಾಗಿ ಕುಳಿತು ಹಬ್ಬದ ಅಂಗವಾಗಿ ಅನ್ನ, ಸಾರು, ಪಚ್ಚಡಿ, ಕೂಟುಕರಿ, ಕಿಚ್ಚಡಿ, ಅವೆಲ್, ಕಾಳನ್, ಓಲನ್, ಪುಳಿಸೇರಿ, ಪುದವನ್, ಉಣ್ಣಿಯಪ್ಪ ಸೇರಿದಂತೆ 21 ಬಗೆಯ ತಿಂಡಿತಿನಿಸುಗಳನ್ನು ಮಾಡಿ ಭೋಜನ ಸ್ವೀಕರಿಸಿದರು.
ಸುಂಟಿಕೊಪ್ಪ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕೇರಳಿಗರು ನೆಲೆಸಿರುವ ಮನೆಗಳ ಮುಂದೆ ಬಣ್ಣಬಣ್ಣದ ಹೂವಿನ ಪೂಕಳಂ ಎಲ್ಲರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.