ADVERTISEMENT

ಸದನದಲ್ಲಿ ಸಂತ್ರಸ್ತರ ಸಮಸ್ಯೆಯ ಪ್ರಸ್ತಾಪ

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:30 IST
Last Updated 15 ಫೆಬ್ರುವರಿ 2020, 14:30 IST
ವಿಧಾನ ಪರಿಷತ್ ಸದಸ್ಯೆ ವಿಣಾ ಅಚ್ಚಯ್ಯ ಹೋರಾಟದಲ್ಲಿ ಪಾಲ್ಗೊಂಡರು
ವಿಧಾನ ಪರಿಷತ್ ಸದಸ್ಯೆ ವಿಣಾ ಅಚ್ಚಯ್ಯ ಹೋರಾಟದಲ್ಲಿ ಪಾಲ್ಗೊಂಡರು   

ಸಿದ್ದಾಪುರ: ಪ್ರವಾಹ ಸಂತ್ರಸ್ತರಿಗೆ ಶೀಘ್ರದಲ್ಲಿ ಶಾಶ್ವತ ಪರಿಹಾರವನ್ನು ಒದಗಿಸಿಕೊಡಲು ಸದನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.

ಸಿದ್ದಾಪುರದಲ್ಲಿ ಪ್ರವಾಸ ಸಂತ್ರಸ್ತರು ಕೈಗೊಂಡಿರುವ ಅಹೋರಾತ್ರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಈ ಬಗ್ಗೆ ಸದನದಲ್ಲಿ ಸಂತ್ರಸ್ತರ ವಿಷಯವನ್ನು ಪ್ರಬಲವಾಗಿ ಮಂಡಿಸುವುದಾಗಿ ತಿಳಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೂ ವಿಷಯವನ್ನು ತಂದು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇವೆ ಎಂದರು.

ADVERTISEMENT

ಜಿ.ಪಂ ಸದಸ್ಯೆ ಚಂದ್ರಕಲಾ ಮಾತನಾಡಿ, ಸಂತ್ರಸ್ತರು ಒಂದು ತುಂಡು ಭೂಮಿಗಾಗಿ ಬೀದಿಗಿಳಿದಿರುವುದು ವಿಪರ್ಯಾಸ. ಸರಕಾರ ಉಳಿದ ಕೆಲಸಕ್ಕಿಂತ ಪ್ರವಾಹ ಸಂತ್ರಸ್ತರ ಸಮಸ್ಯೆಗೆ ಸ್ಪಂಧಿಸಬೇಕು. ಹೋರಾಟದ ಮೂಲಕ ನ್ಯಾಯವನ್ನು ಪಡೆಯಬೇಕಾಗಿದ್ದು, ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೈಕೋರ್ಟ್ ವಕೀಲ ಹೆಚ್.ಎಸ್ ಚಂದ್ರಮೌಳಿ, ಇನ್ನೂ ಕೆಲವು ದಿನಗಳಲ್ಲಿ ಸಂತ್ರಸ್ತರ ಹೋರಾಟಕ್ಕೆ ಸರಕಾರ ಮನ್ನಣೆ ನೀಡದಿದ್ದಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸರಕಾರದ ವಿರುದ್ಧ ಸಂತ್ರಸ್ತರ ಹೆಸರಿನಲ್ಲಿಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲಾಗುವುದು. ಸಂತ್ರಸ್ತರು ಹೋರಾಟವನ್ನು ಮುಂದುವರೆಸಬೇಕು ಎಂದು ಕರೆ ನೀಡಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೇಂದ್ರಸಮಿತಿ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಹೋರಾಟವನ್ನು ಹತ್ತಿಕ್ಕಲು ಹಲವು ಷಡ್ಯಂತರಗಳು ನಡೆಯುತ್ತದೆ. ಆದರೇ ಹಕ್ಕಿಗಾಗಿ ನಡೆಯುವ ಈ ಹೋರಾಟವನ್ನು ಒಗ್ಗಡ್ಟಿನಿಂದ ಮುಂದುವರೆಸಬೇಕೆಂದರು. ಕೇಂದ್ರ ಸಮಿತಿಯ ತಂಡವು ಶೀಘ್ರದಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳಲಿದೆ ಎಂದರು.
ಹೋರಾಟಗಾರ ನೆರವಂಡ ಉಮೇಶ್ ಮಾತನಾಡಿ, ಹೋರಾಟ ಗುರಿ ಮುಟ್ಟುವವರೆಗೂ ಮುಂದುವರೆಸಬೇಕು. ರಾಜಕೀಯ ರಹಿತವಾಗಿ ನಡೆಸುತ್ತಿರು ಹೋರಾಟಕ್ಕೆ ಜಿಲ್ಲೆಯ ಸಂಘ ಸಂಘಸಂಸ್ಥೆಗಳು ಬಬಲ ಸೂಚಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಆರನೇ ದಿನದ ಹೋರಾಟದಲ್ಲಿ ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನಗರಸಭಾ ಸದಸ್ಯ ನಂದಕುಮಾರ್, ಮಾಜಿ ತಾ.ಪಂ ಸದಸ್ಯ ಜಾನ್ಸನ್, ಹೋರಾಟಗಾರ ಪಾಲೇಮಾಡು ಮೊಣ್ಣಪ್ಪ, ನಾಪೊಕ್ಲು ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್, ಮಿನಜ್ ಪ್ರವೀಣ್, ಎಂ.ಹೆಚ್ ಮೂಸ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಹೋರಾಟ 7 ನೇ ದಿನಕ್ಕೆ ಕಾಲಿಡುತ್ತಿದ್ದು, ಶಾಶ್ವತ ನಿವೇಶನ ದೊರಕುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ಸಂತ್ರಸ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.