ADVERTISEMENT

ಮಡಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ‘ವಿಜ್ಞಾನ ಹಬ್ಬ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 12:50 IST
Last Updated 1 ಜನವರಿ 2020, 12:50 IST
ಮಡಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಿಂದ ಆರಂಭವಾಗಲಿರುವ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಹಬ್ಬದ ಅಂಗವಾಗಿ ಶಿಕ್ಷಕರು ಮಕ್ಕಳಿಗೆ ಟೋಪಿ ತಯಾರಿಸುವ ವಿಧಾನ ಕುರಿತು ಮಾಹಿತಿ ನೀಡಿದರು
ಮಡಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಿಂದ ಆರಂಭವಾಗಲಿರುವ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಹಬ್ಬದ ಅಂಗವಾಗಿ ಶಿಕ್ಷಕರು ಮಕ್ಕಳಿಗೆ ಟೋಪಿ ತಯಾರಿಸುವ ವಿಧಾನ ಕುರಿತು ಮಾಹಿತಿ ನೀಡಿದರು   

ಮಡಿಕೇರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಯೋಜನೆಯ ಅಡಿಯಲ್ಲಿ ಜ.2ರಿಂದ ಮೂರು ದಿನ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಮಟ್ಟದ ಮಕ್ಕಳ ‘ವಿಜ್ಞಾನ ಹಬ್ಬ’ ಆಯೋಜಿಸಲಾಗಿದೆ.

ವಿಜ್ಞಾನ ಹಬ್ಬವನ್ನು ಯಶಸ್ವಿಯಾಗಿ ನಡೆಸುವ ಸಂಬಂಧ ಡಿಡಿಪಿಐ ಪಿ.ಎಸ್.ಮಚ್ಚಾಡೋ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮಕ್ಕಳಲ್ಲಿ ಸ್ವ–ಕಲಿಕೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ವಿಜ್ಞಾನ ಹಬ್ಬ ಆಯೋಜಿಸಲಾಗುತ್ತಿದೆ ಎಂದು ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ತಿಳಿಸಿದರು.

ADVERTISEMENT

ಮಕ್ಕಳಲ್ಲಿ ಕಲಿಕೆಯ ಪ್ರೇರಣೆ, ಕುತೂಹಲ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸುವುದು, ತರಗತಿಯ ಚಟುವಟಿಕೆಗಳಿಗೆ ಪೂರಕವಾಗಿ ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮ ಕಲಿಕೆಯನ್ನು ಉತ್ತಮಪಡಿಸಿಕೊಂಡು ಭವಿಷ್ಯದ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಈ ಹಬ್ಬವು ಪ್ರೇರಣೆಯಾಗಲಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಈ ಹಬ್ಬವು ಸಹಕಾರಿಯಾಗಿದೆ ಎಂದರು.

ಮಕ್ಕಳಿಗೆ ತಮ್ಮ ಮನೆ, ಶಾಲೆ ಹಾಗೂ ಸುತ್ತಲಿನ ಪರಿಸರದಲ್ಲಿ ಆಡಿ ಕಲಿ- ನೋಡಿ ಕಲಿ, ಮಾಡಿ ಕಲಿ, ಹಾಡು ಆಡು, ಆಡು ಆಟವಾಡು, ಅಕ್ಷರದಾಟದಂಥ ಚಟುವಟಿಕೆ ಆಧಾರಿತ ಕಲಿಕೆಯಿಂದ ಮಕ್ಕಳಲ್ಲಿ ಕೌಶಲಾಭಿವೃದ್ಧಿ ಬೆಳೆಸಲು ಸಾಧ್ಯ. ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ಮಕ್ಕಳ ವಿಜ್ಞಾನ ಹಬ್ಬವು ಕ್ರಮೇಣ ಪ್ರತಿ ಶಾಲೆಯ ಮತ್ತು ಪ್ರತಿ ಊರಿನ ಹಬ್ಬವಾಗಿ ರೂಪುಗೊಂಡು ಸಮುದಾಯವು ಸರ್ಕಾರಿ ಶಾಲೆಗಳ ಪ್ರಗತಿಗೆ ತೊಡಗಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ನೋಡಲ್ ಅಧಿಕಾರಿ ಕಾಶೀನಾಥ್, ಸಂಯೋಜಕಿ ಗಂಗಮ್ಮ, ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು ಹಾಜರಿದ್ದರು.

ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬದ ಸಂಘಟನೆ ಕುರಿತು ಕಾರ್ಯಕ್ರಮದ ಸಂಚಾಲಕಿ ಗಂಗಮ್ಮ ಸಂಪನ್ಮೂಲ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು.

ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ಶಾಲೆಯ ಮುಖ್ಯ ಶಿಕ್ಷಕ ಬಿ.ಶಿವರಾಂ, ಸಂಪನ್ಮೂಲ ಶಿಕ್ಷಕರಾದ ಟಿ.ಜಿ.ಪ್ರೇಮಕುಮಾರ್, ಕೆ.ಯು.ರಂಜಿತ್, ಮಾರುತಿ, ಲಲಿತಾ, ಜನಿತಾ, ವಿಲಾಸಿನಿ, ಸಂದೇಶ್, ಶ್ರೀನಿವಾಸ್, ಡಿ.ಎಂ.ರೇವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.