ADVERTISEMENT

ಸೋಮವಾರಪೇಟೆ ತಾಲ್ಲೂಕಿನಲ್ಲಿ ಈ 7,100 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಗುರಿ

ಡಿ.ಪಿ.ಲೋಕೇಶ್
Published 21 ಆಗಸ್ಟ್ 2025, 5:09 IST
Last Updated 21 ಆಗಸ್ಟ್ 2025, 5:09 IST
ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಬೆಳೆದಿರುವ ಭತ್ತದ ಪೈರು 
ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಬೆಳೆದಿರುವ ಭತ್ತದ ಪೈರು    

ಸೋಮವಾರಪೇಟೆ: ಭತ್ತದ ಕಣಜ ಎಂದು ಕರೆಸಿಕೊಂಡಿದ್ದ ತಾಲ್ಲೂಕಿನಾದ್ಯಂತ ಅವಧಿಗೂ ಮುನ್ನವೇ ಮುಂಗಾರು ಪ್ರಾರಂಭವಾಗಿದ್ದರಿಂದ ಹೆಚ್ಚಿನ ಪ್ರದೇಶಗಳಲ್ಲಿ ಭತ್ತದ ನಾಟಿ ಕೆಲಸ ಮುಗಿದಿದೆ.

ಕಳೆದ ಕೆಲವು ವರ್ಷಗಳಲ್ಲಿ ಸಮಯಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ತಡವಾಗಿ ಗದ್ದೆಗೆ ರೈತರು ಇಳಿಯುತ್ತಿದ್ದರು. ಈ ಭಾರಿ ಭತ್ತದ ಬೇಸಾಯಕ್ಕೆ ಸಾಕಷ್ಟು ನೀರು ದೊರಕಿದೆ. ಒಂದೆಡೆ ಭತ್ತದ ಕೃಷಿಗೆ ಕಾರ್ಮಿಕರ ಕೊರತೆ, ಹವಾಮಾನ ವೈಪರಿತ್ಯ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ, ಭತ್ತದ ಕೃಷಿಯಿಂದ ಬೆಳೆಗಾರರು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದ್ದು, ಗದ್ದೆಗಳು, ಕಾಫಿ, ಅಡಿಕೆ ತೋಟಗಳಾಗಿ ಪರಿವರ್ತನೆಯಾಗುತ್ತಿದೆ. ಆದರೂ, ಹಲವರು ಇಂದಿಗೂ ಭತ್ತದ ಕೃಷಿಯಿಂದ ಹಿಂದೆ ಸರಿದಿಲ್ಲ.

ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾಮದಲ್ಲಿ ಭತ್ತದ ಕೃಷಿಯಲ್ಲಿ ತೊಡಗಿರುವುದು 

ಅತೀ ಹೆಚ್ಚು ಮಳೆಬೀಳುವ ಶಾಂತಳ್ಳಿ ಹೋಬಳಿಯ ಹೆಗ್ಗಡಮನೆ, ಬೀದಳ್ಳಿ, ಮಲ್ಲಳ್ಳಿ, ಕುಮಾರಳ್ಳಿ, ಕುಂದಳ್ಳಿ, ಕೊತ್ತನಳ್ಳಿ, ಬೆಟ್ಟದಕೊಪ್ಪ, ಹರಗ, ಕೂತಿ, ಯಡೂರು, ತೋಳೂರುಶೆಟ್ಟಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು ಇತ್ಯಾದಿ ಗ್ರಾಮಗಳಲ್ಲಿ ಜೀವನೋಪಾಯಕ್ಕಾಗಿ ಭತ್ತವನ್ನು ಬೆಳೆದಿರುವುದನ್ನು ಕಾಣಬಹುದು. ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಹೋಬಳಿಯ ಗ್ರಾಮಗಳಲ್ಲಿ ಭತ್ತ ನಾಟಿ ಕೆಲಸ ಮುಗಿಯಲು ಬಂದಿದೆ. ಕುಶಾಲನಗರದ ಭಾಗಗಳಲ್ಲಿ ಮಾತ್ರ ಹಾರಂಗಿ ನಾಲೆಯ ನೀರನ್ನು ಬಳಸಿಕೊಂಡು ನಾಟಿ ಕೆಲಸ ಮಾಡುವುದರಿಂದ ನಾಟಿ ಕೆಲಸ ಮುಗಿದಿಲ್ಲ.

ADVERTISEMENT

‘ಈ ಭಾರಿ ಹೈಬ್ರೀಡ್ ಭತ್ತದ ಬೀಜವನ್ನು ಬಿತ್ತಿ ಗದ್ದೆಯಲ್ಲಿ ನಾಟಿ ಮಾಡಿದ್ದೇವೆ. ನೀರಿನ ಕೊರತೆ ಕಾಣುತ್ತಿಲ್ಲ. ಆದರೂ, ಭತ್ತದ ಬೆಳೆಗಾರರು ನಿರಂತರವಾಗಿ ನಷ್ಟಕ್ಕೊಳಗಾಗುವುದು ಮುಂದುವರೆದಿದೆ. ಸರ್ಕಾರ ಭತ್ತದ ಕೃಷಿಕರಿಗೆ ಸಹಾಯಧನವನ್ನು ನೀಡುವ ಮೂಲಕ ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು’ ಎಂದು ಹಾನಗಲ್ಲು ಗ್ರಾಮದ ಮೋಹನ್ ತಿಳಿಸಿದರು.

‘ಈ ವರ್ಷ ಭಾರಿ ಮಳೆಯಾಗುತ್ತಿದ್ದರೂ, ಹಲವೆಡೆ ಭತ್ತದ ಪೈರು ಕೊಳೆತುಹೋಗಿದೆ. ಮತ್ತೊಮ್ಮೆ ಭತ್ತದ ಬೀಜವನ್ನು ಭಿತ್ತಿ ಗರ್ವಾಲೆ ಗ್ರಾಮ ಪಂಚಾಯಿತಿಯ ಹಲವೆಡೆ ಭತ್ತದ ನಾಟಿ ಕೆಲಸ ಮುಗಿಸಲಾಗಿದೆ. ನದಿ ತೊರೆಗಳ ಬದಿಯಲ್ಲಿನ ಗದ್ದೆಗೆ ಹಲವು ಭಾರಿ ನೀರು ತುಂಬಿ ಹರಿದು, ಗದ್ದೆ ಮುಚ್ಚಿದ್ದವು. ನಮ್ಮ ಭಾಗದಲ್ಲಿ ಭತ್ತದ ಒಂದು ಬೆಳೆಯನ್ನು ಎಲ್ಲರೂ ಬೆಳೆಯುತ್ತಿದ್ದು, ಮನೆ ಬಳಕೆಯೊಂದಿಗೆ ಅಲ್ಪ ಫಸಲನ್ನು ಮಾರುತ್ತಿದ್ದೇವೆ’ ಎಂದು ಗರ್ವಾಲೆ ಗ್ರಾಮದ ಲೋಕೇಶ್ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಈ ಭಾರಿ 7100 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿಗೆ ಗುರಿಯನ್ನಿರಿಸಿಕೊಳ್ಳಲಾಗಿದೆ. ಈಗಾಗಲೇ 5390 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ತಿಳಿಸಿದರು.

ಪ್ರಾದೇಶಿಕ ತಳಿಗಳನ್ನು ಬಳಸಿ ನಾಟಿ

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಭತ್ತದ ಭಿತ್ತನೆ ಬೀಜ ವಿತರಿಸಲಾಗಿತ್ತು. ಆದರೂ ಹೆಚ್ಚಿನವರು ಖಾಸಗಿ ಅಂಗಡಿಗಳಲ್ಲಿ ಹೈಬ್ರೀಡ್ ಭತ್ತದ ಭೀಜ ಸೇರಿದಂತೆ ಹಲವು ತಳಿಗಳನ್ನು ಖರೀದಿಸಿದ್ದರೆ ಕೆಲವರು ಪ್ರಾದೇಶಿಕ ತಳಿಗಳನ್ನು ಬಳಸಿ ನಾಟಿ ಮಾಡಿದ್ದಾರೆ. ಈಗ ಸರ್ಕಾರ ಪ್ಲೇಸ್ಟೋರ್ ನಲ್ಲಿ ಬೆಳೆ ಸಮೀಕ್ಷೆ 2025 ಎಂಬ ಆ್ಯಪ್ ಇದ್ದು ಅದನ್ನು ರೈತರೇ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಅವರ ಬೆಳೆ ಸಮೀಕ್ಷೆ ಮಾಡಿ ವೆಬ್‌ಗೆ ಅಪ್ಲೋಡ್ ಮಾಡಬಹುದು. ತಾವು ಬೆಳೆದ ಬೆಳೆಯ ವಿಸ್ತೀರ್ಣ ಬೆಳೆವಿಮೆಗೆ ಪ್ರಕೃತ್ತಿ ವಿಕೋಪದ ಬೆಳೆ ನಷ್ಟ ಮಿನಿಮಮ್ ಬೆಲೆ ಸಪೋರ್ಟ್ ವರದಿಯನ್ನು ಅವರೇ ನೀಡಬಹುದಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.