ಸುಂಟಿಕೊಪ್ಪ: ಇಲ್ಲಿನ ಜಿ.ಯಂ.ಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘ ಆಯೋಜಿಸಿರುವ 26ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಗುರುವಾರ ನಡೆದ ಪ್ರಿ– ಕ್ವಾರ್ಟರ್ ಪಂದ್ಯದಲ್ಲಿ ವಾಲ್ಪರೆ ಎಫ್.ಸಿ. ತಮಿಳುನಾಡು, ಟಿಬೆಟಿಯನ್ ಬೈಲುಕೊಪ್ಪ, ಕ್ಯಾಲಿಕಟ್ ಎಫ್.ಸಿ. ಕೇರಳ, ಟ್ರೆಡಿಶನಲ್ ಟೂರಿಸಂ ಎಫ್.ಸಿ. ತಿರುಚ್ಚಿ ತಮಿಳುನಾಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ದಿನದ ಮೊದಲ ಪಂದ್ಯವು ಮೊಗ್ರಾಲ್ ಎಫ್.ಸಿ ಕುಂಬ್ಳೆ ಮತ್ತು ವಾಲ್ಪರೆ ಎಫ್.ಸಿ. ತಮಿಳುನಾಡು ತಂಡಗಳ
ನಡುವೆ ನಡೆಯಿತು. 2 ತಂಡಗಳು ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿ ಮನರಂಜನೆ ನೀಡಿದ್ದವು. ಶಿಸ್ತುಬದ್ಧ ಆಟಕ್ಕೆ ಗಮನಹರಿಸಿದ ತಮಿಳುನಾಡು ತಂಡ ಪಂದ್ಯದ ಮೊದಲಾರ್ಧದ 3ನೇ ನಿಮಿಷದಲ್ಲಿ ತಂಡದ ಮುನ್ನಡೆ ಆಟಗಾರ ಶಿಬಿನ್ ಮೊದಲ ಗೋಲನ್ನು ಹೊಡೆದು ಮುನ್ನಡೆ ತಂದುಕೊಟ್ಟರು.
10 ನೇ ನಿಮಿಷದಲ್ಲಿ ನಿಖಿಲ್ ಅಯ್ಯಪ್ಪ ಗೋಲು ಬಾರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಕುಂಬ್ಳೆ ತಂಡದ ಆಟಗಾರ ನಿಶಾದ್ ಗೋಲು ಬಾರಿಸಿ ತಮಿಳುನಾಡು ತಂಡಕ್ಕೆ ಆಘಾತ ನೀಡಿದರು. ಆದರೂ ತಮಿಳುನಾಡು ತಂಡ ಮೊದಲಾರ್ಧದಲ್ಲಿ 2-1ಗೋಲುಗಳ ಮುನ್ನಡೆ ಪಡೆದುಕೊಂಡಿತು.
ದ್ಚಿತೀಯಾರ್ಧದಲ್ಲಿ ತಮಿಳುನಾಡು ತಂಡದ ಆಟಗಾರ ಮೆಲ್ವಿನ್ 8 ನಿಮಿಷದಲ್ಲಿ ಆಕರ್ಷಕ ಗೋಲು ಹೊಡೆದರು. ನಂತರ ಕುಂಬ್ಳೆ ತಂಡವನ್ನು ತನ್ನ ಚಾಣಕ್ಷ ಆಟದ ಮೂಲಕ ಬೆವರಿಳಿಸಿದರು. 14 ನಿಮಿಷದಲ್ಲಿ ಮೆಲ್ವಿನ್ ಮತ್ತೊಂದು ಗೋಲು ಹೊಡೆದರು. ಕುಂಬ್ಳೆ ತಂಡ ಎದುರಾಳಿ ತಂಡದ ಗೋಲು ಪಟ್ಟಿಗೆ ಹೊಡೆದರೂ ವಿಫಲವಯಿತು. ತಮಿಳುನಾಡು ತಂಡದ ಅನುಭವಿ ಆಟಗಾರ ನಿಖಿಲ್ ಅಯ್ಯಪ್ಪ ಕೊನೆಯ ನಿಮಿಷದಲ್ಲಿ ಒಂದು ಗೋಲನ್ನು ಬಾರಿಸಿ ತಮಿಳುನಾಡದ ಗೆಲುವಿಗೆ ಕರಣರದರು. ಕೊನೆಗೆ ತಮಿಳುನಾಡು ತಂಡ 5-1 ಗೋಲುಗಳಿಂದ ಜಯಗಳಿಸಿ ಕ್ಯಾರ್ಟರ್ ಫೈನಲ್ ಆಟಕ್ಕೆ ಪ್ರವೇಶ ಪಡೆಯಿತು.
ದಿನದ ಎರಡನೇ ಪಂದ್ಯವು ಟ್ರೆಡಿಶನಲ್ ಎಫ್.ಸಿ. ತಿರುಚ್ಚಿ ಮತ್ತು ಅಶೋಕ ಎಫ್.ಸಿ. ಮೈಸೂರು ತಂಡಗಳ ನಡುವೆ ನಡೆಯಿತು. ತಿರುಚ್ಚಿ ತಂಡ ಬಿರುಸಿನ ಆಟಕ್ಕೆ ಒತ್ತು ನೀಡಿ ಮೈಸೂರು ತಂಡದ ಮೇಲೆ ಹಿಡಿತ ಸಾಧಿಸಿತು. ಈ ನಡುವೆ ತಿರುಚ್ಚಿ ತಂಡದ ಮುನ್ನಡೆ ಆಟಗಾರ ರಸೂಲ್ ಹೊಡೆದ ಚೆಂಡು ಗೋಲು ಕೀಪರ್ ತಡೆದರೂ ಗೋಲಾಗಿ ಪರಿವರ್ತನೆಗೊಂಡಿತು. ಮೈಸೂರು ತಂಡದ ಆಟಗಾರರು ಹೊಡೆದ ಚೆಂಡನ್ನು ತಿರುಚ್ಚಿ ತಂಡದ ಗೋಲುಕೀಪರ್ ಅಶ್ವಿನ್ ಆಕರ್ಷಕವಾಗಿ ತಡೆದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. 17 ನಿಮಿಷದಲ್ಲಿ ಜಯ್ ಹಾಗೂ 24 ನೇ ನಿಮಿಷದಲ್ಲಿ ಶ್ಯಾಮ್ ಗೋಲು ಬಾರಿಸಿ, ಮೊದಲಾರ್ಥದಲ್ಲಿ 3-0 ಗೋಲುಗಳಿಂದ ತಿರುಚ್ಚಿ ತಂಡ ಮುನ್ನಡೆ ಪಡೆಯಿತು.
ಪಂದ್ಯದ ದ್ವಿತೀಯಾರ್ಧದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ತಿರುಚ್ಚಿ ತಂಡ ಮೈಸೂರು ತಂಡಕ್ಕೆ ಅಡ್ಡಿಯಾಗಿ ನಿಂತಿತು. ತಿರುಚ್ಚಿ ಆಟಗಾರ ದುಲ್ಸನ್ 14 ನೇ ನಿಮಿಷದಲ್ಲಿ ಗೋಲು ಗಳಿಸುವುದರಲ್ಲಿ ಸಫಲರಾದರು. ಕೊನೆಯ ಹಂತದಲ್ಲಿ ಶಿಸ್ತುಬದ್ಧ ಆಟಕ್ಜೆ ಒತ್ತು ನೀಡಿದ ಮೈಸೂರು ತಂಡದ ಪ್ರಶಾಂತ್ ಅವರು ಪಂದ್ಯದ 17 ಮತ್ತು 20 ನೇ ನಿಮಿಷದಲ್ಲಿ ಗೋಲು ಹೊಡೆದು ಪ್ರೇಕ್ಷಕರಿಗೆ ಆಟದ ಮುದ ನೀಡಿದರು. ಕೊನೆಯ ಕ್ಷಣದಲ್ಲೂ ಗೋಲು ಹೊಡೆಯುವ ವಿಫಲ ಯತ್ನ ನಡೆಯುವುದರ ಮೂಲಕ ಟ್ರೆಡಿಶನಲ್ ಟೂರಿಸಂ ಎಫ್.ಸಿ.ತಿರುಚ್ಚಿ ತಂಡವು 4-2 ಗೋಲುಗಳಿಂದ ಮೈಸೂರು ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಕೆ.ಜಿ.ಎಫ್ ಮತ್ತು ಊಟಿ ತಂಡ ಮೈದಾನಕ್ಕೆ ಆಗಮಿಸದ್ದರಿಂದ ಟಿಬೆಟಿಯನ್ ಬೈಲುಕೊಪ್ಪ ಮತ್ತು ಕ್ಯಾಲಿಕಟ್ ತಂಡ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿವೆ.
ಉದ್ಘಾಟನೆ: ಫುಟ್ಬಾಲ್ ಟೂರ್ನಿಯನ್ನು ಹಿರಿಯ ಆಟಗಾರ ಮೋಣಪ್ಪ ಪೂಜಾರಿ ಮತ್ತು ಡಿ.ಪನ್ಯ ತೋಟದ ಮಾಲೀಕ ಅಖಿಲೇಶ್ ಬಸಪ್ಪ ಉದ್ಘಾಟಿಸಿದರು. ಬಿಬಿವೈಸಿ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್, ಹಮೀದ್, ಆದಿಶೇಷ, ಗ್ರಾಮ ಪಂಚಾಯಿತಿ, ಉಪಾಧ್ಯಕ್ಷೆ ಶಿವಮ್ಮ, ಮಾಜಿ ಅಧ್ಯಕ್ಷ ಕೆ.ಇ.ಕರೀಂ ಇದ್ದರು.
*ಮಧ್ಯಾಹ್ನ 1.30 ಗಂಟೆಗೆ ವಾಲ್ಪರೆ ಎಫ್.ಸಿ ತಮಿಳುನಾಡು ಮತ್ತು ಇಕೆಎನ್ ಎಫ್.ಸಿ.ಇರಿಟ್ಟಿ ಕಣ್ಣೂರು *ಮಧ್ಯಾಹ್ನ 2.30 ಗಂಟೆಗೆ ಮಿಡ್ ಸಿಟಿ ಎಫ್.ಸಿ.ಸುಂಟಿಕೊಪ್ಪ ಮತ್ತು ಟ್ರೆಡಿಶಿನಲ್ ಟೂರಿಸಂ ಎಫ್.ಸಿ.ತಿರುಚ್ಚಿ
*ಮಧ್ಯಾಹ್ನ3.30 ಗಂಟೆಗೆ ಟಿಬೆಟಿಯನ್ ಬೈಲುಕೊಪ್ಪ ಮತ್ತು ನೇತಾಜಿ ಯುವಕ ಸಂಘ ಕೊಡಗರಹಳ್ಳಿ *ಸಂಜೆ 5 ಗಂಟೆಗೆ ಬೆಟ್ಟಗೇರಿ ಎಫ್.ಸಿ.ಬೆಟ್ಟಗೇರಿ ಮತ್ತು ಕ್ಯಾಲಿಕಟ್ ಎಫ್.ಸಿ.ಕ್ಯಾಲಿಕಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.