ADVERTISEMENT

ಸಿವಿಲ್‌ ನ್ಯಾಯಾಧೀಶರ ಹುದ್ದೆ ಪರೀಕ್ಷೆ: ಮೊದಲ ಪ್ರಯತ್ನದಲ್ಲಿ 30ನೇ ರ‍್ಯಾಂಕ್

ಸಿವಿಲ್‌ ನ್ಯಾಯಾಧೀಶರ ಹುದ್ದೆ ಪರೀಕ್ಷೆ; ಸೈಯದಾ ಕಾಶ್ಮೀರ ಸಿಮ್ರಾನ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:19 IST
Last Updated 19 ಫೆಬ್ರುವರಿ 2026, 3:19 IST
ಸೈಯದಾ ಕಾಶ್ಮೀರ ಸಿಮ್ರಾನ್
ಸೈಯದಾ ಕಾಶ್ಮೀರ ಸಿಮ್ರಾನ್   

ಮಡಿಕೇರಿ: ವಿರಾಜಪೇಟೆ ಪಟ್ಟಣದ ನಿವಾಸಿ ಮೌಂಟನ್ ವ್ಯೂ ಶಾಲೆಯ ಸಂಸ್ಥಾಪಕರಾದ ದಿವಂಗತ ಸಯ್ಯದ್ ನಜೀರ್ ಅಹಮ್ಮದ್ ಮತ್ತು ಸೈಯದಾ ನಿಖತ್ ಅಸ್ಮ ಅವರ ಪುತ್ರಿ ಸೈಯದಾ ಕಾಶ್ಮೀರ ಸಿಮ್ರಾನ್ ಅವರು ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರು ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೆ 30ನೇ ರ‍್ಯಾಂಕ್‌ ಪಡೆದಿರುವುದು ವಿಶೇಷ.

ತಮ್ಮ ತಂದೆ, ತಾಯಿ ವಿರಾಜಪೇಟೆ ಪಟ್ಟಣದಲ್ಲಿ ಸ್ಥಾಪಿಸಿದ್ದ ಮೌಂಟನ್‌ ವ್ಯೂ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದಿದ್ದ ಇವರು ಮಂಗಳೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ,‌ ಮೈಸೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ಬಿಬಿಎ ಎಲ್‌ಎಲ್‌ಬಿ ಪದವಿ ಮುಗಿಸಿ 2023ರಲ್ಲಿ ವಿರಾಜಪೇಟೆ ಪಟ್ಟಣದಲ್ಲಿ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಕುರಿತು ‘ಪ್ರಜಾವಾಣಿ’ ಸೈಯದಾ ಕಾಶ್ಮೀರ ಸಿಮ್ರಾನ್ ಅವರನ್ನು ಸಂ‍ಪರ್ಕಿಸಿದಾಗ ಅವರು, ‘ನಮ್ಮ ತಂದೆ, ತಾಯಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಾತ್ರವಲ್ಲ, ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪ್ರತಿಪಾದಿಸುತ್ತಿದ್ದರು. ಇದೀಗ ಅವರು ಕನಸನ್ನು ನನಸು ಮಾಡಿದ ತೃಪ್ತಿ ನನಗಿದೆ’ ಎಂದು ಹೇಳಿದರು.

ADVERTISEMENT

ಇವರೊಂದಿಗೆ ಐ.ಆರ್.ಪ‍್ರಮೋದ್ ಅವರ ಮಾರ್ಗದರ್ಶನವೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾಯಿತು ಎಂದು ಅವರು ನೆನಪಿಸಿಕೊಂಡರು.

ಇಲ್ಲಿಯವರೆಗೆ ಐ.ಆರ್.ಪ್ರಮೋದ್‌ ಅವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಒಟ್ಟು ನಾಲ್ವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 10 ಸಾವಿರ ಅಧಿಕ ಮಂದಿ ಸಿವಿಲ್ ನ್ಯಾಯಾಧೀಶರ ಹುದ್ದೆಯ ಪರೀಕ್ಷೆ ತೆಗೆದುಕೊಂಡಿದ್ದು, ಆ ಪೈಕಿ 83 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ 30ನೇ ಸ್ಥಾನವನ್ನು ಸೈಯದಾ ಕಾಶ್ಮೀರ ಸಿಮ್ರಾನ್ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.