
ವಿರಾಜಪೇಟೆ: ಪಟ್ಟಣದ ಛತ್ರಕೆರೆ ಬಳಿಯಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಈಚೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಬ್ರಹ್ಮಕಲಶೋತ್ಸವದ ಮೊದಲ ದಿನದಂದು ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ ಪುಣ್ಯಾಹ, ಋತ್ವೀಕರಣ ವಾಸ್ತು ಪೂಜೆ, ಹೋಮ, ಬಲಿ ರಾಕ್ಷೊಘ್ನ ಹೋಮ, ಸುದರ್ಶನ ಹೋಮ ನಡೆಯಿತು. ಎರಡನೇ ದಿನದಂದು ಮುಂಜಾನೆ ಗಣಪತಿ ಹೋಮ, ಪುಣ್ಯಾಹ ತೆಂಗಿನಕಾಯಿ ಗಣ ಹವನ, ನವಗ್ರಹ ಶಾಂತಿ, ವಾಯುಸ್ತುತಿ ಹೋಮ, ವಿಷ್ಣು ಹೋಮ, ಪ್ರತಿಷ್ಠಾ ಹೋಮ, ಕಲಶ ಪ್ರತಿಷ್ಠೆ ಪೂಜೆ, ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಉಪಾಧ್ಯಾಯ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯ ನಡೆಯಿತು. ಈ ಸಂದರ್ಭ ದೇವಾಲಯದಲ್ಲಿ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಪಟ್ಟಣ ಹಾಗೂ ಗ್ರಾಮೀಣ ಭಾಗದ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.