ADVERTISEMENT

‘ಮಧ್ಯರಾತ್ರಿ ಹುಲಿ ತಂದು ಕೊಡಗಿಗೆ ಬಿಡುತ್ತಾರೆ’: ವೀಣಾ ಅಚ್ಚಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 11:51 IST
Last Updated 23 ಫೆಬ್ರುವರಿ 2021, 11:51 IST
ವೀಣಾ ಅಚ್ಚಯ್ಯ
ವೀಣಾ ಅಚ್ಚಯ್ಯ   

ಮಡಿಕೇರಿ: ‘ರಾಜ್ಯದ ಬೇರೆ ಸ್ಥಳದಲ್ಲಿ ಸೆರೆ ಹಿಡಿದಿರುವ ನರಭಕ್ಷಕ ಹುಲಿಗಳನ್ನು ಕೊಡಗು ಜಿಲ್ಲೆಯ ನಾಗರಹೊಳೆ ವ್ಯಾಪ್ತಿಗೆ ತಂದು ಬಿಡುತ್ತಿದ್ದು ಇದರಿಂದ ಕೊಡಗಿನ ಜನರು ತೊಂದರೆಗೆ ಸಿಲುಕಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಇಲ್ಲಿ ಮಂಗಳವಾರ ಹೇಳಿದರು.

‘ಹುಲಿ ದಾಳಿಯಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಾಫಿ ಬೆಳೆಗಾರರು, ಕಾರ್ಮಿಕರು ಸಹನೆ ಕಳೆದುಕೊಂಡಿದ್ದು, ವನ್ಯಜೀವಿಗಳ ದಾಳಿ ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದಲ್ಲಿ ಗ್ರಾಮಸ್ಥರಿಗೇ ಗುಂಡು ಹಾರಿಸಲು ಅನುಮತಿ ನೀಡಬೇಕು. ನರಭಕ್ಷಕ ಹುಲಿಗೆ ಗುಂಡಿಕ್ಕಲು ಅವಕಾಶ ನೀಡುವಂತೆ ಜನರು ಕೇಳುತ್ತಿದ್ದಾರೆ. ಹುಲಿ ದಾಳಿ ನೋಡಿಕೊಂಡು ಸುಮ್ಮನಿರಬೇಕೇ? ಬಂದೂಕು ಜೊತೆಗೆ ಇಟ್ಟುಕೊಂಡೇ ಕಾಫಿ ತೋಟಕ್ಕೆ ಹೋಗುವ ಅನಿವಾರ್ಯತೆಯಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಧರ್ಮಜ ಉತ್ತಪ್ಪ ಮಾತನಾಡಿ, ‘ನಾಗರಹೊಳೆ ಅಂಚಿನ ಶ್ರೀಮಂಗಲ, ಕುಟ್ಟ, ಪೊನ್ನಂಪೇಟೆ ಭಾಗದಲ್ಲಿ ಮಧ್ಯರಾತ್ರಿ 12ರ ಬಳಿಕ ದೊಡ್ಡ ಲಾರಿಗಳು ಓಡಾಡುತ್ತಿವೆ. ಹಲವರು ಕಣ್ಣಾರೆ ಕಂಡಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ನರಭಕ್ಷಕ ಹುಲಿಗಳನ್ನು ಮಧ್ಯರಾತ್ರಿ ತಂದು ದಕ್ಷಿಣ ಕೊಡಗು ಭಾಗಕ್ಕೆ ಬಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಕಡಿಮೆಯಿತ್ತು. ಹೊರಗಿನಿಂದ ಹುಲಿಗಳನ್ನು ತಂದು ಬಿಡುತ್ತಿರುವ ಪರಿಣಾಮವೇ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಅರಣ್ಯಾಧಿಕಾರಿಗಳು, ಕೊಡಗು ಜಿಲ್ಲೆಯನ್ನೇ ‘ಹುಲಿಧಾಮ’ ಮಾಡಲು ಮುಂದಾಗಿದ್ದಾರೆ. ಹುಲಿ ಸಂತತಿ ಹೆಚ್ಚಳಕ್ಕೆ ನಾಗರಹೊಳೆ ಸೂಕ್ತ ಸ್ಥಳವೆಂದು ತಜ್ಞರು ಸಲಹೆ ನೀಡಿರಬೇಕು. ಅದೇ ಕಾರಣಕ್ಕೆ ಬೇರೆ ಕಡೆ ಸೆರೆಯಾದ ಹುಲಿ ತಂದು ಕೊಡಗಿಗೆ ಬಿಡಲಾಗುತ್ತಿದೆ’ ಎಂದುಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.