ಕುಶಾಲನಗರ: ಇಲ್ಲಿನ ಹೆಬ್ಬಾಲೆ ಗ್ರಾಮವು ಗ್ರಾಮದೇವತೆ ಬನಶಂಕರಿ ದೇವಿಯ ವಾರ್ಷಿಕ ಹಬ್ಬಕ್ಕೆ ನವವಧುವಿನಂತೆ ಸಿಂಗಾರಗೊಂಡಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಬನಶಂಕರಿ ದೇವಿಯ ವಾರ್ಷಿಕ ಉತ್ಸವ ಹಾಗೂ ಜಾತ್ರೋತ್ಸವ ಡಿ.1ರಂದು ರಾತ್ರಿ ವಿಜೃಂಭಣೆಯಿಂದ ನಡೆಯಲಿದೆ.
ಗ್ರಾಮದ ಬಸವೇಶ್ವರ ಹಾಗೂ ಬನಶಂಕರಿ ದೇವಾಲಯ ಸಮಿತಿಯಿಂದ ಅದ್ದೂರಿ ಉತ್ಸವದ ಆಚರಣೆಗಾಗಿ ಸಕಲ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಪ್ರತಿ ವರ್ಷ ಕಾರ್ತೀಕ ಮಾಸದ ಕೊನೆಯ ಅಮಾವಾಸ್ಯೆಯಂದು ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇಡೀ ಜಿಲ್ಲೆಯಲ್ಲಿ ನಡೆಯುವ ದೊಡ್ಡ ಗ್ರಾಮೀಣ ಹಬ್ಬ ಎನಿಸಿದೆ. ಮಾತ್ರವಲ್ಲ, ‘ಮಿನಿ ಮಡಿಕೇರಿ ದಸರಾ’ ಮಾದರಿಯಲ್ಲಿ ಆಚರಿಸಲಾಗುತ್ತಿದೆ.
ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಒಂದೊಂದು ಸಮುದಾಯದ ಜನರು ಒಂದೊಂದು ಸೇವಾರ್ಥವನ್ನು ವಹಿಸಿಕೊಳ್ಳುವ ಮೂಲಕ ಸೌಹಾರ್ದದಿಂದ ಹಬ್ಬ ಆಚರಿಸುವುದು ವಿಶೇಷ.
ದೇವಿಯ ಉತ್ಸವದೊಂದಿಗೆ ಗ್ರಾಮದ ವಿವಿಧ ಬ್ಲಾಕ್ಗಳ (ಬೀದಿ) ಉತ್ಸವ ಸಮಿತಿ ವತಿಯಿಂದಲೂ ಉತ್ಸವ ಮಂಟಪಗಳನ್ನು ಸಿದ್ಧಪಡಿಸಿ ನಡೆಸುವ ಶೋಭಾಯಾತ್ರೆ ಹಬ್ಬಕ್ಕೆ ಮೆರುಗು ನೀಡುತ್ತದೆ.
ಭಾನುವಾರ ಮಧ್ಯರಾತ್ರಿ ಗ್ರಾಮದ ಬಸವೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬನಶಂಕರಿ ದೇವಿಯ ಉತ್ಸವ ಮಂಟಪ ಹಾಗೂ ಶೋಭಾಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಆಕರ್ಷಕ ಮದ್ದುಗುಂಡು ಬಾಣಬಿರುಸುಗಳ ಪ್ರದರ್ಶನ ಹಬ್ಬಕ್ಕೆ ವಿಶೇಷ ಆಕರ್ಷಣೆಯಾಗಿದೆ. ರಾತ್ರಿ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಲಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆಯಲಿವೆ.
ಪವಿತ್ರ ಬನದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಕಾರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ್ ಮತ್ತು ಕಾರ್ಯದರ್ಶಿ ಎಚ್.ಎಚ್.ರಾಜಶೇಖರ್ ಹಾಗೂ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯಲಿವೆ. ಸಂಜೆ 4 ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯನ್ನು ಅಲಂಕರಿಸಲಾಗುತ್ತದೆ. ರಾತ್ರಿ 9 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಲಾಗುತ್ತದೆ. ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.
ಹಬ್ಬದ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ರಾತ್ರಿ 10 ಗಂಟೆ ವೇಳೆಗೆ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಗುತ್ತದೆ.
9 ದಿವಸ ಉಪವಾಸ ವ್ರತ ಆಚರಿಸಿ ಹರಕೆ ಹೊತ್ತ ಭಕ್ತರು ಅಗ್ನಿಕುಂಡ ತುಳಿದು ದೇವಿಗೆ ಹಣ್ಣುತುಪ್ಪ ಅಭಿಷೇಕ ಮಾಡುತ್ತಾರೆ. ವೀರಗಾಸೆ ವೀರಭದ್ರೇಶ್ವರ ಕುಣಿತ ಹಾಗೂ ಕಂಸಾಳೆ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಲಿವೆ. ದೇವಸ್ಥಾನ ಸಮಿತಿ ವತಿಯಿಂದ ರಾತ್ರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕೈಗೊಳ್ಳಲಾಗಿದೆ.
ಮಾದರಿ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಿ.2ರಂದು ರಾಜ್ಯ ಮಟ್ಟದ ಎತ್ತಿನ ಗಾಡಿ ಓಟ ಸ್ಪರ್ಧೆ ಆಯೋಜಿಸಲಾಗಿದೆ.
ದೇಗುಲದ ಐತಿಹಾಸಿಕ ಹಿನ್ನೆಲೆ
ವಿಜಯನಗರ ಕೃಷ್ಣದೇವರಾಯ ಆಳ್ವಿಕೆ ಸಂದರ್ಭ ಈ ಬನಶಂಕರಿ ದೇವಸ್ಥಾನ ನಿರ್ಮಾಣವಾಗಿದೆ ಎನ್ನಲಾಗಿದೆ. ವಿಜಯನಗರ ಮತ್ತು ಬಾದಾಮಿ ಮೇಲೆ ಮಹಮ್ಮದ್ ಘಜ್ನಿ ದಾಳಿ ನಡೆಸಿದ ಸಂದರ್ಭ ಅಲ್ಲಿಂದ ವಲಸೆ ಬಂದ ಸೈನ್ಯ ಮತ್ತು ಜನರು ಹೆಬ್ಬಾಲೆ ಗ್ರಾಮದ ದಟ್ಟಾರಣ್ಯದ ಬಳಿ ತಲೆಮೆರೆಸಿಕೊಂಡು ವಾಸವಾಗಿದ್ದರು. ಈ ವೇಳೆ ಬಾದಾಮಿ ಜನರು ತಮ್ಮ ಕುಲದೇವತೆ ಬನಶಂಕರಿ ದೇವಿಯ ಕಲ್ಲಿನ ವಿಗ್ರಹವನ್ನು ತಂದ ಸೈನ್ಯದ ನಾಯಕ ತಿಮ್ಮನಾಯಕ ಎಂಬ ವ್ಯಕ್ತಿ ಹೆಬ್ಬಾಲೆಯ ದಟ್ಟ ಅರಣ್ಯದ ನಡುವೆ ಕಲ್ಲಿನ ಚಪ್ಪಡಿಗಳನ್ನು ಬಳಸಿಕೊಂಡು ಸಣ್ಣದಾದ ಗುಡಿಯನ್ನು ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದರು ಎಂಬ ಕಥೆಯಿದೆ. ನಂತರ ದಿನಗಳಲ್ಲಿ ಬನಶಂಕರಿ ದೇವಿಯನ್ನು ಹೆಬ್ಬಾಲೆ ಗ್ರಾಮಸ್ಥರ ಆರಾಧ್ಯ ದೇವತೆಯಾಗಿಯೂ ಹಾಗೂ ಗ್ರಾಮ ದೇವತೆಯಾಗಿ ಪೂಜಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.