ಮಡಿಕೇರಿ: ನಗರದ ಸಾಂಪ್ರದಾಯಿಕ ಕರಗೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ನಡೆದಿವೆ. ಈ ಕರಗೋತ್ಸವದ ನಂತರವೇ ‘ಬೆಳಕಿನ ದಸರೆ’ ಎನಿಸಿದ ಮಡಿಕೇರಿ ದಸರೆ ಗರಿಗೆದರಲಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮೂಡಿದೆ.
ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗದೇ ಅನೂಚಾನವಾಗಿ ನಡೆದುಕೊಂಡು ಬಂದಿರುವ ಸಂಸ್ಕೃತಿ, ಸಂಪ್ರದಾಯಗಳನ್ನು ಪಾಲಿಸುವ ಹೆಗ್ಗಳಿಕೆ ಈ ಕರಗೋತ್ಸವಕ್ಕೆ ಇರುವುದು ವಿಶೇಷ.
ಕೊಡಗಿನಲ್ಲಿ ಸುದೀರ್ಘ ಕಾಲ ಆಳ್ವಿಕೆ ನಡೆಸಿ, ತಮ್ಮದೇ ಕೊಡುಗೆ ಕೊಟ್ಟಿರುವ ಹಾಲೇರಿ ರಾಜವಂಶಸ್ಥರು ಆರಂಭಿಸಿದ ನಗರದ 4 ಶಕ್ತಿದೇವತೆಗಳೆನಿಸಿದ ದಂಡಿನ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ಹಾಗೂ ಕೋಟೆ ಮಾರಿಯಮ್ಮ ಕರಗಗಳ ಉತ್ಸವವು ಕೇವಲ ಕೊಡಗು ಮಾತ್ರವಲ್ಲ, ನಾಡಿನ ಸಮಸ್ತ ಸುಸಂಸ್ಕೃತ ಜನರ ಗಮನವನ್ನೂ ಸೆಳೆದಿದೆ.
ಹಿಂದೆ ಮಡಿಕೇರಿಯನ್ನು ಮಾರಕ ರೋಗವೊಂದು ಇನ್ನಿಲ್ಲದಂತೆ ಕಾಡಿ ಸಾಕಷ್ಟು ಸಾವುಗಳು ಉಂಟಾದಾಗ ಅಂದಿನ ಕೊಡಗಿನ ರಾಜರು ಇಲ್ಲಿನ ಪ್ರಧಾನ ಶಕ್ತಿದೇವತೆಗಳಾದ ದಂಡಿನ ಮಾರಿಯಮ್ಮ, ಕಂಚಿಕಾಮಾಕ್ಷಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ ಕರಗೋತ್ಸವ ನಡೆಸಲು ಆರಂಭಿಸಿದರು ಎಂದು ಐತಿಹ್ಯ ಹೇಳುತ್ತದೆ. ಈ ಪರಿಪಾಠ ಇಂದಿಗೂ ಸಾಂಪ್ರದಾಯಿಕವಾಗಿಯೇ ನಡೆದುಕೊಂಡು ಬಂದಿದೆ.
ಸುಮಾರು ಒಂದು ತಿಂಗಳಿಗೂ ಅಧಿಕ ಕಾಲದಿಂದಲೇ ಕರಗ ಹೊರುವವರು ನಿಯಮಿತವಾಗಿ ಪೂಜಾವಿಧಿಗಳನ್ನು ಮಾಡುತ್ತಿದ್ದಾರೆ. ಸುಮಾರು 15 ದಿನಗಳಿಂದ ಪಾದರಕ್ಷೆ ಇಲ್ಲದೇ ನಡೆಯುವ ಅಭ್ಯಾಸವನ್ನೂ ಕೆಲವರು ನಡೆಸಿದ್ದಾರೆ.
ಬರಿಗಾಲಿನಲ್ಲಿ ಕರಗ ಹೊತ್ತು ನಿತ್ಯವೂ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯದಂತೆ ಕರಗಧಾರಿಗಳು ನವರಾತ್ರಿಯಲ್ಲಿ ಸಂಚರಿಸುತ್ತಾರೆ. ಸಂಪ್ರದಾಯದಂತೆ ತಮ್ಮ ವ್ಯಾಪ್ತಿಯ ಬಡಾವಣೆಗಳಿಗೆ ಭೇಟಿ ನೀಡುತ್ತಾರೆ. ಜನರು ಶ್ರದ್ಧಾ, ಭಕ್ತಿಗಳಿಂದ ಪೂಜೆ ಸಲ್ಲಿಸುತ್ತಾರೆ.
ಇಂದು ಸಂಜೆ ಕರಗೋತ್ಸವಕ್ಕೆ ಚಾಲನೆ
ನಗರದ ಇತಿಹಾಸ ಪ್ರಸಿದ್ದ 4 ಶಕ್ತಿ ದೇವತೆಗಳ ಕರಗಗಳ ಉತ್ಸವಕ್ಕೆ ಸೆ. 22ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನ ಕೆರೆ ಬಳಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಲಿದ್ದಾರೆ. ನಗರ ದಸರಾ ಸಮಿತಿ ವತಿಯಿಂದಲೂ ಸಾಂಪ್ರದಾಯಿಕ ಪೂಜೆಯನ್ನರ್ಪಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳಲಾಗುತ್ತದೆ.
ಇದಕ್ಕಾಗಿ ಪಂಪಿನಕೆರೆಯಿಂದ ಮಹದೇವಪೇಟೆಯ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ರಸ್ತೆಯ ಇಕ್ಕೆಲಗಳನ್ನೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ರಸ್ತೆಯಲ್ಲಿ ದೀಪಗಳ ತೋರಣ ಕಟ್ಟಲಾಗಿದೆ. ಇಡೀ ನಗರದ ಕರಗೋತ್ಸವಕ್ಕಾಗಿ ಅಣಿಯಾಗುತ್ತಿದೆ.
‘ಸೇನೆಗೆ ಸೇರಿದರೂ ಕರಗ ಹೊರುವುದನ್ನು ಬಿಡಲಿಲ್ಲ’
ಕಳೆದ 53 ವರ್ಷಗಳಿಂದ ಇಲ್ಲಿನ ದಂಡಿನ ಮಾರಿಯಮ್ಮ ದೇಗುಲದ ಕರಗ ಹೊರುತ್ತಿರುವ 65 ವರ್ಷದ ಉಮೇಶ್ಪೂಜಾರಿ ಅವರು ಕರಗ ಹೊರಲು ಸಿದ್ಧತೆ ನಡೆಸಿದ್ದಾರೆ.
ಅವರು ಸೈನಿಕರಾಗಿ ಕಾರ್ಯನಿರ್ವಹಿಸುತ್ತಿರುವಾಗಲೂ ಕರಗ ಹೊರುವುದನ್ನು ಬಿಟ್ಟಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘1972ರಲ್ಲಿ ಕರಗ ಹೊರಲು ಆರಂಭಿಸಿ ನಂತರ 1979ರಲ್ಲಿ ಸೇನೆ ಸೇರಿದೆ. ಪ್ರತಿ ವರ್ಷವೂ 2 ತಿಂಗಳು ರಜೆ ಹಾಕಿ ಬಂದು ಕರಗ ಹೊರುತ್ತಿದ್ದೆ. ಒಮ್ಮೆ 4 ದಿನ ರೈಲಿನಲ್ಲಿ ಒಂದು ದಿನ ಬಸ್ನಲ್ಲಿ ಪ್ರಯಾಣ ಮಾಡಿ ಬಂದು ಕರಗ ಹೊತ್ತ ಉದಾಹರಣೆಯೂ ಇದೆ’ ಎಂದು ಅವರು ನೆನಪಿಸಿಕೊಂಡರು. ಕಳೆದ 5 ವರ್ಷದಿಂದ ಇವರ ಸೋದರ ಕೃಷ್ಣ ಸಹ ಇವರ ಜತೆಗೆ ಕರಗ ಹೊರುತ್ತಿದ್ದಾರೆ. 5ನೇ ತರಗತಿ ಓದುವಾಗಲೇ ಕರಗ ಹೊತ್ತರು ಕಳೆದ 52 ವರ್ಷಗಳಿಂದ ಕರಗ ಹೊರುತ್ತಿರುವ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲದ ಕರಗವ್ರತಧಾರಿ ಪಿ.ಪಿ.ಚಾಮಿ ತಾವು 5ನೇ ತರಗತಿ ಓದುತ್ತಿರುವಾಗಲೇ ಕರಗ ಹೊರಲು ಆರಂಭಿಸಿದೆ ಎಂದು ಹೇಳುತ್ತಾರೆ.
ಅವರು ತಮ್ಮ ಈ ವಯಸ್ಸಿನಲ್ಲೂ ಉತ್ಸಾಹಿ ಯುವಕರಂತೆ ಹೆಜ್ಜೆ ಹಾಕುತ್ತಾರೆ. ನಿತ್ಯವೂ ಇವರು 10 ಕಿ.ಮೀ ಕರಗ ಹೊತ್ತು ಸಾಗುತ್ತಾರೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ಕರಗೋತ್ಸವ ನಡೆಯುವುದೇ ಸಮಾಜದ ಒಳಿತಿಗಾಗಿ’ ಎಂದರು. ಇವರೊಂದಿಗೆ ಸೋದರ ಹರೀಶ್ ಅವರೂ ಕರಗ ಹೊರಲಿದ್ದಾರೆ. ಕರಗ ಹೊರಲಿರುವ ತಂದೆ ಮಗ ಕಂಚಿ ಕಾಮಾಕ್ಷಮ್ಮ ದೇಗುಲದ ಕರಗವನ್ನು 58 ವರ್ಷದ ಪಿ.ಸಿ.ಉಮೇಶ್ ಅವರು ಸುಮಾರು 34 ವರ್ಷಗಳಿಂದ ಹೊರುತ್ತಿದ್ದಾರೆ. ಕಳೆದ 2 ವರ್ಷದಿಂದ ಅವರ ಪತ್ರ ಪಿ.ಯು.ಕಾರ್ತೀಕ್ ಸಹ ಜತೆಯಲ್ಲೇ ಕರಗ ಹೊರುತ್ತಿದ್ದಾರೆ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿ.ಸಿ.ಉಮೇಶ್ ಈ ಬಾರಿ ನಾನು 35ನೇ ಬಾರಿ ಕರಗ ಹೊರುತ್ತಿದ್ದೇನೆ ಎಂದು ತಿಳಿಸಿದರು. 3 ದಶಕಗಳಿಂದ ಸಹೋದರರ ಸೇವೆ ಕೋಟೆ ಮಾರಿಯಮ್ಮ ಕರಗವನ್ನು ಸತತ 33 ವರ್ಷಗಳಿಂದ ಪಿ.ಬಿ.ಅನೀಶ್ಕುಮಾರ್ ಹಾಗೂ 31 ವರ್ಷಗಳಿಂದ ಪಿ.ಬಿ.ಉಮೇಶ್ಸುಬ್ರಮಣಿ ಹೊರುತ್ತಿದ್ದಾರೆ.
ಈ ಬಾರಿಯೂ ಅವರು ಕರಗ ಹೊರಲು ವ್ರತಧಾರಿಗಳಾಗಿದ್ದಾರೆ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅನೀಶ್ಕುಮಾರ್ ‘ಸಂಪ್ರದಾಯಬದ್ಧವಾಗಿ ಕರಗೋತ್ಸವ ನಡೆಯುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.