ADVERTISEMENT

ಪ್ರೌಢಶಾಲೆ ವಾರ್ಷಿಕೋತ್ಸವ | ವಿದ್ಯೆಯೇ ಎಲ್ಲರ ಸಂಪತ್ತು: ಸಮಾಜ ಸೇವಕ ರವೀಂದ್ರ

ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 61ನೇ ಶಾಲಾ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:47 IST
Last Updated 14 ಡಿಸೆಂಬರ್ 2025, 7:47 IST
ಸುಂಟಿಕೊಪ್ಪ ಸಮೀಪದ ಕೊಡಗನಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಮಾಜ ಸೇವಕ ಹರಪಲ್ಲಿ ರವೀಂದ್ರ ಉದ್ಘಾಟಿಸಿದರು..
ಸುಂಟಿಕೊಪ್ಪ ಸಮೀಪದ ಕೊಡಗನಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಮಾಜ ಸೇವಕ ಹರಪಲ್ಲಿ ರವೀಂದ್ರ ಉದ್ಘಾಟಿಸಿದರು..   

ಸುಂಟಿಕೊಪ್ಪ: ಯಾರಿಂದಲೂ ಕಿತ್ತುಕೊಳ್ಳಲಾಗದ ಮತ್ತು ಅಪಹರಿಸಲಾಗದ ಸಂಪತ್ತು ಎಂದರೆ ಅದು ವಿದ್ಯೆ ಎಂದು ಸಮಾಜ ಸೇವಕ ಹರಪಳ್ಳಿ ಎನ್.ರವೀಂದ್ರ ಹೇಳಿದರು.

ಸಮೀಪದ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 61ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಯಲ್ಲಿರುವ ಈ ಶಾಲೆ ಕನ್ನಡ ಮಾದ್ಯಮದಾದಿದ್ದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧನೆ ಮಾಡಿದೆ. ಬದುಕಿನಲ್ಲಿ ನಾವು ಕೊಟ್ಟು ಹೋಗಬೇಕು.ಇಲ್ಲವೇ ಬಿಟ್ಟು ಹೋಗಬೇಕು ಎಂಬ ಆಶಾಭಾವನೆಯಿಂದ ನಾವು ಬದುಕಬೇಕು.ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಪ್ರಕಾಶಗೊಳಿಸುವುದೇ ವಿದ್ಯೆ.ವಿದ್ಯೆಯಿಂದ ನಮ್ಮ ಬಾಳು ಮಾತ್ರವಲ್ಲ ಸಮಾಜವನ್ನು ಬೆಳಗುವಂತಾಗಬೇಕು ಎಂದರು.

ADVERTISEMENT

ಶಾಲೆಯ 138 ಮಕ್ಕಳಿಗೆ ಟ್ರ್ಯಾಕ್‌ ಶೂಟ್ ಕೊಡುಗೆಯಾಗಿ ನೀಡಿ ಮಾತನಾಡಿದ ಕಾಫಿ ಬೆಳೆಗಾರ ಮತ್ತು ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಅವರು, ಸರ್ಕಾರಿ ಶಾಲೆ ಮತ್ತು ಕನ್ನಡ ಮಾದ್ಯಮ ಶಾಲೆ ಎಂಬ ಕೀಳರಿಮೆ ಬೇಕಾಗಿಲ್ಲ.ಈ ಶಾಲೆಯು ಸಮಾಜಕ್ಕೆ ಅತ್ಯುತ್ತಮ ನಾಗರೀಕರನ್ನು ಕೊಡುಗೆಯಾಗಿ ನೀಡಿದೆ.ಈ ಪರಂಪರೆ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಂಟಿಕೊಪ್ಪ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್, ಅನುದಾನಿತ ಶಾಲೆ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿತವರು ಸಮಾಜದಲ್ಲಿ ಹಿಂದೆ ಬಿದ್ದಿಲ್ಲ. ವಿದ್ಯೆ ಕಲಿಸಿದ ಗುರು ನಮ್ಮ ಹೀರೋ ಆಗಬೇಕೆಂದು ಕರೆ ನೀಡಿದರು.

ಶಾಲಾಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅವರು ಮಾತಮಾಡಿ, ಸರ್ಕಾರಿ ಅನುದಾನಿತ ಶಾಲೆಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಶಾಲೆಗಳಲ್ಲಿ ವರ್ಗಾವಣೆಯಾದರೆ ಅಥವಾ ವಯೋಸಹಜ ನಿವೃತ್ತಿ ಹೊಂದಿದ್ದರೆ ಆ ಹುದ್ದೆಗಳಿಗೆ ಮರು ನೇಮಕಾತಿಗೊಳಿಸುವ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ. ಶಿಕ್ಷಕರ ವೇತನ ಹೊರತು ಪಡಿಸಿ ಬೇರೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ. ಶಾಲಾ ಆಡಳಿತ ಮಂಡಳಿಯು 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಶಾಲಾ ಶುಲ್ಕವನ್ನು ಪಾವತಿಸಿದ್ದು, ಶಿಕ್ಷಕ ವೃಂದದವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಪ್ರಾಯೋಜಿಸಿದ್ದಾರೆಂದು ಅವರು ಹೇಳಿದರು.

ಇದೇ ವೇಳೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. 

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ.ಶಂಕರ್, ಉಪಾಧ್ಯಕ್ಷ ಎಂ.ಎ.ಕುಟ್ಟಪ್ಪ, ನಿರ್ದೇಶಕ ಎಂ.ಎಸ್.ಸುರೇಶ್ ಚಂಗಪ್ಪ, ಭಾರತೀಯ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಪಿ.ಎಂ.ರಂಜಿತ್ ಕಾರ್ಯಪ್ಪ, ಕಂಬಿಬಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ನಯನ,ಗಿರಿಧರ್ ಮತ್ತು ಧರ್ಮಪ್ಪ, ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎ.ಇಂದಿರಾ , ಶಾಲಾ ಶಿಕ್ಷಕರಾದ ಶಿವಪ್ಪ ಗುರ್ಕಿ, ಎಂ.ಎಸ್.ದಿನೇಶ್, ಅಡ್ಡಮನಿ ಇತರರು ಉಪಸ್ಥಿತರಿದ್ದರು‌.

ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರ ಮನಸೂರೆಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.