ADVERTISEMENT

ವಿರಾಜಪೇಟೆ: ಲೋಕಾರ್ಪಣೆಗೊಂಡ ಕೂಟುಹೊಳೆ ಸೇತುವೆ

ಕರ್ನಾಟಕ-ಕೇರಳ ರಾಜ್ಯ ಬೆಸೆಯುವ ಕಟ್ಟಡ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 16:01 IST
Last Updated 31 ಜನವರಿ 2022, 16:01 IST
ವಿರಾಜಪೇಟೆ ಸಮೀಪದ ಕರ್ನಾಟಕದ-ಕೇರಳ ಗಡಿಯಲ್ಲಿನ ಕೂಟುಹೊಳೆ ನೂತನ ಸೇತುವೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು. ಕೇರಳದ ಲೋಕೋಪಯೋಗಿ ಸಚಿವ ಮಹಮದ್ ರಿಯಾಜ್, ಕೇರಳದ ಶಾಸಕ ಸನ್ನಿ ಜೋಸೆಫ್, ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ ಎಂ.ಸುಜಾ ಕುಶಾಲಪ್ಪ ಇದ್ದರು.
ವಿರಾಜಪೇಟೆ ಸಮೀಪದ ಕರ್ನಾಟಕದ-ಕೇರಳ ಗಡಿಯಲ್ಲಿನ ಕೂಟುಹೊಳೆ ನೂತನ ಸೇತುವೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು. ಕೇರಳದ ಲೋಕೋಪಯೋಗಿ ಸಚಿವ ಮಹಮದ್ ರಿಯಾಜ್, ಕೇರಳದ ಶಾಸಕ ಸನ್ನಿ ಜೋಸೆಫ್, ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ ಎಂ.ಸುಜಾ ಕುಶಾಲಪ್ಪ ಇದ್ದರು.   

ವಿರಾಜಪೇಟೆ: ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಬೇರ್ಪಡಿಸುವ ಸಮೀಪದ ಕೂಟುಹೊಳೆ ನೂತನ ಸೇತುವೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಸರಳ ಕಾರ್ಯಕ್ರಮದಲ್ಲಿ ಕೇರಳ ಸರ್ಕಾರದ ಲೋಕೋಪಯೋಗಿ ಸಚಿವ ಮಹಮದ್ ರಿಯಾಜ್, ಕೇರಳದ ಇರಿಟ್ಟಿಯ ಶಾಸಕ ಸನ್ನಿ ಜೋಸೆಫ್, ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ ಎಂ.ಸುಜಾ ಕುಶಾಲಪ್ಪ ಸೇತುವೆ ಉದ್ಘಾಟಿಸಿದರು.

ತೆರೆದ ಜೀಪಿನಲ್ಲಿ ಗಣ್ಯರು ಸೇತುವೆಯಲ್ಲಿ ಸಂಚರಿಸುವ ಮೂಲಕ ಸೇತುವೆಯನ್ನು ಲೋಕಾರ್ಪಣೆ ಗೊಳಿಸಿದರು.

ADVERTISEMENT

ಜಿಲ್ಲೆ ಹಾಗೂ ನೆರೆಯ ಕೇರಳದ ಕಣ್ಣೂರು ನಡುವೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿ ಸಮೀಪದ ಮಾಕುಟ್ಟ ಬಳಿ ಕೂಟುಹೊಳೆಗೆ ಕೇರಳ ಸರ್ಕಾರ ಸುಮಾರು ₹6.75 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸಿದೆ. ಈ ಮೂಲಕ ಉಭಯ ರಾಜ್ಯಗಳ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಕೂಟುಹೊಳೆ ಹಳೆ ಸೇತುವೆ ಶತಮಾನಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಆಗಿನ ಅಗತ್ಯಕ್ಕೆ ತಕ್ಕಂತೆ ಏಕಕಾಲದಲ್ಲಿ ಒಂದು ವಾಹನ ಮಾತ್ರ ಸಂಚರಿಸಬಹುದಾದಷ್ಟು ಹಳೆಯ ಸೇತುವೆ ಕಿರಿದಾಗಿತ್ತು. ಅಲ್ಲದೆ ಸೇತುವೆ ಶಿಥಿಲಗೊಂಡಿರುವುದರಿಂದ ಹೊಸ ಸೇತುವೆ ಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು.

ಇದನ್ನು ಮನಗಂಡ ಕೇರಳ ಸರ್ಕಾರ 2017ರಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು. ಆದರೆ ಕಾಮಗಾರಿ ಆರಂಭಗೊಂಡ ಒಂದೆರಡು ತಿಂಗಳಲ್ಲಿಯೇ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ವೇಗ ಪಡೆದುಕೊಂಡ ಕಾಮಗಾರಿ ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿತ್ತು. ಹೊಸ ಸೇತುವೆಯು ಅಂದಾಜು 84 ಮೀ ಉದ್ದ ಹಾಗೂ 12 ಮೀ ಅಗಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.