ಮಡಿಕೇರಿ: ಇಲ್ಲಿನ ಭಾಗಮಂಡಲದ ಕೋರಂಗಾಲದಲ್ಲಿರುವ ಅಟಲ್ಬಿಹಾರಿ ವಾಜಪೇಯಿ ವಸತಿ ಶಾಲೆಯ 500 ಮಕ್ಕಳು ನೀರಿಲ್ಲದೇ ಪರದಾಡುತ್ತಿದ್ದು, ಶಾಲೆಗೆ ಜುಲೈ 10ರವರೆಗೆ ರಜೆ ಘೋಷಿಸ ಲಾಗಿದೆ. ಈ ಭಾಗದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
6ನೇ ತರಗತಿಯಿಂದ ಪಿಯುಸಿವರೆಗೆ ಇರುವ ಈ ವಸತಿ ಶಾಲೆಯಲ್ಲಿದ್ದ ಜಿಲ್ಲೆಯ ಹಾಗೂ ಸಮೀಪದ ಜಿಲ್ಲೆಯ ಮಕ್ಕಳನ್ನು ಅವರ ಪೋಷಕರು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕ ಭಾಗದಿಂದ ಪೋಷಕರು ಬಂದಿಲ್ಲದ ಕಾರಣ 30 ಮಕ್ಕಳನ್ನು ಶಾಲೆಯಲ್ಲೇ ಇರಿಸಿಕೊಳ್ಳಲಾಗಿದೆ.
ಇದುವರೆಗೂ ಕುಶಾಲನಗರ ತಾಲ್ಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಶಾಲೆಯು ಈಗಷ್ಟೇ ಇಲ್ಲಿನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಸಮೀಪದಲ್ಲಿ ಹರಿಯುವ ಹೊಳೆಯ ನೀರು ತೀರಾ ಕೆಂಪು ಬಣ್ಣದಿಂದ ಕೂಡಿದ್ದು, ಅದರಿಂದ ಅಡುಗೆ ಮಾಡಲು ಆಗುತ್ತಿಲ್ಲ. ಜಿಲ್ಲಾಡಳಿತದಿಂದ ಜನರೇಟರ್ ವ್ಯವಸ್ಥೆ ಮಾಡಿಕೊಟ್ಟರೆ ಮಕ್ಕಳಿಗೆ ಅನುಕೂಲ ವಾಗುತ್ತದೆ ಎಂದು ಸ್ಥಳೀಯರು ತಿಳಿಸಿ ದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲೆಯ ವಾರ್ಡನ್ ದೀಪಕ್, ‘ಅಧಿಕಾರಿಗಳ ಅನುಮತಿ ಪಡೆದೇ ರಜೆ ನೀಡಲಾಗಿದೆ. ‘ಜನರೇಟರ್ ಖರೀದಿ ಪ್ರಕ್ರಿಯೆಯು ಟೆಂಡರ್ ಹಂತದಲ್ಲಿದೆ. ವಿದ್ಯುತ್ ಇಲ್ಲದೇ ಇರುವುದರಿಂದ 500ಕ್ಕೂ ಅಧಿಕ ಮಕ್ಕಳಿಗೆ ನೀರು ಪೂರೈಸಲಾಗುತ್ತಿಲ್ಲ. ಸದ್ಯ, ದೂರದ ಊರಿನ ಹಾಗೂ ಅನಾಥ 30 ಮಕ್ಕಳು ಇದ್ದಾರೆ. ಅವರಿಗಾಗಿ ಶುದ್ಧೀಕರಿಸಿದ ನೀರನ್ನೇ ತರಿಸಿಕೊಂಡು ಅದನ್ನೇ ಬಳಕೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಈ ಶಾಲೆಯಲ್ಲಿ ರಾಜ್ಯದ 19 ಜಿಲ್ಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. 2013ರಲ್ಲಿ ಆರಂಭವಾದ ಶಾಲೆಯು ಇದುವರೆಗೂ ಕುಶಾಲನಗರ ತಾಲ್ಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿತ್ತು. ನಿತ್ಯ ಕನಿಷ್ಠ 30ಸಾವಿರ ಲೀಟರ್ ನೀರುಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.