ಕೋಲಾರ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಗರಸಭೆ ಅಧಿಕಾರಿಗಳು ನಗರದ ಪ್ರಮುಖ ಮಾರುಕಟ್ಟೆ ಸ್ಥಳಗಳಿಗೆ ಗುರುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿ, ನಿಯಮ ಮೀರಿದ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ತಪಾಸಣೆ ನಡೆಸಿದರು. ಕೆಲವು ಸಗಟು ಮಾರಾಟ ಅಂಗಡಿಗಳಿಗೂ ಭೇಟಿ ನೀಡಿದ ಅಧಿಕಾರಿಗಳು, ವ್ಯಾಪಾರಿಗಳ ಸಬೂಬುಗಳಿಗೆ ಕಿವಿಗೊಡದೆ ದಂಡ ವಿಧಿಸಿದರು.
ನಗರ ಹೊಸ ಬಸ್ ನಿಲ್ದಾಣ ವೃತ್ತದಿಂದ ಕಾರ್ಯಾಚರಣೆ ಶುರು ಮಾಡಿದ ಅಧಿಕಾರಿಗಳು ಬ್ರಾಹ್ಮಣರ ಬೀದಿ, ದೊಡ್ಡಪೇಟೆ, ಕಾಳಮ್ಮಗುಡಿ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿದರು.
ನಗರಸಭೆ ಅಧಿಕಾರಿಗಳೊಡನೆ ಪಾಲ್ಗೊಂಡಿದ್ದ ಮಂಡಳಿಯ ಕ್ಷೇತ್ರ ಸಹಾಯಕ ವೆಂಕಟಾಚಲಪತಿ ಪ್ಲಾಸ್ಟಿಕ್ ಗೇಜ್ ಯಂತ್ರವನ್ನು ಹಿಡಿದು ಪ್ರತಿ ಅಂಗಡಿಯಲ್ಲೂ ತಪಾಸಣೆ ಮಾಡಿದರು. 40 ಮೈಕ್ರಾನ್ಗಿಂತಲೂ ಕಡಿಮೆ ಇರುವ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದೇ ಅಲ್ಲದೆ, ಹಲವರಿಗೆ ದಂಡ ವಿಧಿಸಲಾಯಿತು.
ವಾಗ್ವಾದ: ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವು ಅಂಗಡಿಗಳ ಮಾಲೀಕರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದವೂ ನಡೆಯಿತು. ದೊಡ್ಡಪೇಟೆಯ ಸಗಟು ಮಾರಾಟ ಅಂಗಡಿಯೊಂದಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ, ಅಲ್ಲಿ 40 ಮೈಕ್ರಾನ್ಗಿಂತಲೂ ಕಡಿಮೆ ಇರುವ ಪ್ಲಾಸ್ಟಿಕ್ ಸಾಮಗ್ರಿಗಳ ರಾಶಿಯೇ ಕಂಡು ಬಂತು. ಮೊದಲೇ ಪ್ರಚಾರ ಮಾಡಿದ್ದರೂ ಅಂಥವೇ ಸಾಮಗ್ರಿಗಳನ್ನು ಅಂಗಡಿ ಮಾಲೀಕರು ಮಾರಾಟ ಮಾಡುತ್ತಿರುವುದರ ಬಗ್ಗೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಆ ಸಂದರ್ಭದಲ್ಲಿ ಅಂಗಡಿ ಮಾಲೀಕರು, ಪ್ಲಾಸ್ಟಿಕ್ ನಿಷೇಧದ ಬಗ್ಗೆ ತಮಗೆ ಯಾರೂ ಮಾಹಿತಿ ನೀಡಿಲ್ಲ. ಈಗ ಅನುಮತಿ ನೀಡಿದರೆ ಎಲ್ಲವನ್ನೂ ಉತ್ಪಾದಕರಿಗೆ ವಾಪಸ್ ಮಾಡಲಾಗುವುದು ಎಂದು ಹೇಳಿದರು. ಅದಕ್ಕೆ ಸೊಪ್ಪು ಹಾಕದ ಕಂದಾಯ ಅಧಿಕಾರಿ ಚಲಪತಿ, ಮೂರು ತಿಂಗಳ ಹಿಂದೆಯೇ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ನೀಡಲಾಗಿತ್ತು. ನಿಯಮ ಮೀರಿ ಪ್ಲಾಸ್ಟಿಕ್ ಸಾಮಗ್ರಿ ಮಾರುತ್ತಿದ್ದೀರಿ. ಹೀಗಾಗಿ ದಂಡ ಪಾವತಿಸಿ ಎಂದು ಸೂಚಿಸಿದರು.
ಅಂಗಡಿ ಮಾಲೀಕರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲಾಯಿತು. ನಗರಸಭೆ ಆರೋಗ್ಯಾಧಿಕಾರಿ ರಮೇಶ್, ವಸಂತಕುಮಾರ್, ತ್ಯಾಗರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 10ರ ವೇಳೆಗೆ ಶುರುವಾದ ಕಾರ್ಯಾಚರಣೆ ಮಧ್ಯಾಹ್ನ 1 ಗಂಟೆವರೆಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.