ಕೆಜಿಎಫ್: ‘ನ್ಯಾಯಾಲಯದಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ವಿಚಾರಣಾಧೀನ ಕೈದಿಗಳನ್ನು ಅಕ್ರಮವಾಗಿ ಆಸ್ಪತ್ರೆಗೆ ದಾಖಲು ಮಾಡುವುದನ್ನು ನಿಲ್ಲಿಸಬೇಕು’ ಎಂದು ಲೋಕಾಯುಕ್ತ ಅಧಿಕಾರಿ ಪವನ್ ಕುಮಾರ್ ಸೂಚನೆ ನೀಡಿದರು. ರಾಬರ್ಟಸನ್ಪೇಟೆಯಲ್ಲಿ ಸೋಮವಾರ ಅಧಿಕಾರಿಗಳು ಮತ್ತು ಸಾರ್ವಜನಿಕರ ಕುಂದು ಕೊರತೆಸಭೆಯಲ್ಲಿ ಮಾತನಾಡಿದರು.
ಯಾವುದೇ ಕಾಯಿಲೆಗಳು ಇಲ್ಲದಿದ್ದರೂ, ಹಣ ತೆಗೆದುಕೊಂಡು ಕೈದಿಗಳನ್ನು ಆಸ್ಪತ್ರೆಗೆ ದಾಖಲು ಮಾಡುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂಬ ದೂರುಗಳು ಬಂದಿವೆ. ಪೊಲೀಸರು ಕಷ್ಟಪಟ್ಟು ಬಂಧಿಸುವ ಕೈದಿಗಳನ್ನು ಜೈಲಿನಲ್ಲಿರಿಸುವುದನ್ನು ಬಿಟ್ಟು ಹಾಯಾಗಿ ಆಸ್ಪತ್ರೆಯಲ್ಲಿ ಇರುವುದಕ್ಕೆ ಅವಕಾಶ ಕಲ್ಪಿಸುವುದು ಒಳ್ಳೆಯ ಲಕ್ಷಣವಲ್ಲ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್ ಅವರಿಗೆ ಹೇಳಿದರು.
‘ಅರಣ್ಯ ಇಲಾಖೆಯವರು ವನ ಸಂಪತ್ತು ಬೆಳೆಸುವ ನಿಟ್ಟಿನಲ್ಲಿ ಸಸಿಗಳನ್ನು ವಿತರಣೆ ಮಾಡುವಾಗ, ಸ್ವಯಂಸೇವಾ ಸಂಘಗಳು ಮತ್ತು ಶಾಲಾ ಕಾಲೇಜುಗಳ ಸಹಕಾರ ಪಡೆಯಬೇಕು. ಇದರಿಂದಾಗಿ ವನ್ಯ ಸಂಪತ್ತು ಹೆಚ್ಚಿಸಬಹುದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂಬ ದೂರಿನ ಮೇಲೆ ಜೀಪ್ ತೆಗೆದುಕೊಂಡು ಹೋದರೆ, ಕೂಡಲೇ ಮೊಬೈಲ್ ಮೂಲಕ ಗ್ರಾಮಸ್ಥರು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಗ್ರಾಮಗಳಲ್ಲಿ ನಡೆಯುವ ದಂಧೆಯನ್ನು ತಡೆಗಟ್ಟಲು ಕಷ್ಟವಾಗುತ್ತಿದೆ’ ಎಂದು ಅಬ್ಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
‘ರಾತ್ರಿ ಹೊತ್ತು ಅಬ್ಕಾರಿ ದಳದ ಮಹಿಳಾ ಅಧಿಕಾರಿಗಳು ದಾಳಿಗೆ ಹೋದಾಗ, ಪೊಲೀಸರ ನೆರವು ಪಡೆದು ದಾಳಿ ನಡೆಸಬೇಕು. ಎಲ್ಲಾ ರೀತಿಯಲ್ಲಿಯೂ ಎಚ್ಚರಿಕೆ ವಹಿಸಬೇಕು’ ಎಂದು ಪವನ್ಕುಮಾರ್ ಹೇಳಿದರು.
‘ತಾಲ್ಲೂಕಿನಾದ್ಯಂತ ಇರುವ 2100 ಕ್ಕೂ ಹೆಚ್ಚು ಕೃಷಿ ಹೊಂಡಗಳಿಗೆ ಬೇಲಿ ಹಾಕುವ ಸಂಬಂಧವಾಗಿ ರೈತರಿಗೆ ನೋಟಿಸ್ ನೀಡಲಾಗಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಶಾಲೆಗಳಿಗೆ ರುಚಿಯಾದ ಮತ್ತು ಸ್ವಚ್ಚವಾದ ಬಿಸಿಯೂಟ ಸಿಗಬೇಕು. ಹಾಸ್ಟೆಲ್ಗಳಲ್ಲಿ ಸೊಳ್ಳೆ ಪರದೆಗಳನ್ನು ಅಳವಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ಸಾರಿಗೆ ಅಧಿಕಾರಿ ಯೋಮಕೇಶವ, ವಿಶೇಷ ತಹಶೀಲ್ದಾರ್ ಶಂಕರ್, ನಗರಸಭೆ ವ್ಯವಸ್ಥಾಪಕ ನಂಜುಂಡಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಕೃಷ್ಣಮೂರ್ತಿ, ಗೋಪಾಲ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.