ADVERTISEMENT

ಕಣ್ಸೆಳೆದ ವಿಜ್ಞಾನ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 6:14 IST
Last Updated 6 ಆಗಸ್ಟ್ 2013, 6:14 IST

ಕೆಜಿಎಫ್: ಬೆಮಲ್‌ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಇನ್‌ಸ್ಪೈರ್ ಅವಾರ್ಡ್ ಮತ್ತು ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳ ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಓರೆಗಚ್ಚಿತು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇತರ ಇಲಾಖೆಗಳ ಸಹಯೋಗದೊಡನೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದರು. ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳು, ರಾಜ್ಯಮಟ್ಟ ನಂತರ ರಾಷ್ಟ್ರ ಮಟ್ಟದಲ್ಲಿ  ಪ್ರದರ್ಶನಕ್ಕೆ ಅವಕಾಶ ಪಡೆಯಬಹುದು.

ಕೆಲವು ಶಾಲೆಗಳು ಸರ್ಕಾರ ತಮಗೆ ನೀಡಿದ ಐದು ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಪ್ರಯೋಗವನ್ನು ಮಾಡಿದ್ದರೆ, ಕೆಲವು ಸರ್ಕಾರಿ ಶಾಲೆಗಳು ಸಾವಿರ ರೂಪಾಯಿಯೊಳಗೆ ವೈಜ್ಞಾನಿಕ ಮಾದರಿ ತಯಾರಿಸಿ ನೀರಸ ಪ್ರದರ್ಶನ ನೀಡಿದವು. ಕೆಲವು ಶಾಲೆಗಳು ಸೃಜನಶೀಲತೆ ಬೆಳೆಸಿಕೊಳ್ಳಲು ಆಸಕ್ತಿ ತೋರದೆ, ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಮಾದರಿಗಳನ್ನು ತಂದು ಪ್ರದರ್ಶಿಸಿದ್ದವು.

ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಉಪಕರಣಗಳ ಬಗ್ಗೆ ವಿಶ್ಲೇಷಣೆ ನೀಡಿದರು. ಬಹಳಷ್ಟು ಕಡೆ ವಿದ್ಯಾರ್ಥಿಗಳು ಇಡೀ ವಿಶ್ಲೇಷಣೆಯನ್ನು ಬಾಯಿಪಾಠ ಮಾಡಿಕೊಂಡು ಬಂದಿದ್ದರು. ವಿಷಯಕ್ಕೆ ಬಿಟ್ಟು ಬೇರೆ ಪ್ರಶ್ನೆಗಳನ್ನು ಕೇಳಿದರೆ ತಬ್ಬಿಬ್ಬಾಗುತ್ತಿದ್ದರು.

ಕೊನೆಯ ದಿನವಾದ ಸೋಮವಾರದಂದು ನಗರದ ಹಲವು ವಿದ್ಯಾಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದವು.  ಡಯಟ್ ಪ್ರಾಂಶುಪಾಲ ಆಂಜನಪ್ಪ, ಹಿರಿಯ ಉಪನ್ಯಾಸಕ ವೆಂಕಟರಾಮರೆಡ್ಡಿ ಉಸ್ತುವಾರಿ ವಹಿಸಿದ್ದರು. ಪ್ರದರ್ಶನದಲ್ಲಿ ಕೆಜಿಎಫ್, ಮುಳಬಾಗಲು, ಕೋಲಾರ, ಶ್ರೀನಿವಾಸಪುರ ಮತ್ತು ಮಾಲೂರು ತಾಲ್ಲೂಕುಗಳ ಎಲ್ಲ ಶಾಲೆಗಳು ಭಾಗವಹಿಸಿದ್ದವು. ಭಾಗವಹಿಸಿದ ಎ್ಲ್ಲಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.