ADVERTISEMENT

ಮೂರಡಿ ಆಳದಲ್ಲಿ ಜಿನುಗುವ ನೀರು

ಪ್ರಜಾವಾಣಿ ವಿಶೇಷ
Published 27 ಏಪ್ರಿಲ್ 2012, 6:20 IST
Last Updated 27 ಏಪ್ರಿಲ್ 2012, 6:20 IST

ಕೆಜಿಎಫ್: ಸಾವಿರ ಅಡಿ ಕೊರೆದರೂ ನೀರು ಸಿಗದ ತಾಲ್ಲೂಕಿನಲ್ಲಿ ಕೇವಲ ಮೂರು ಅಡಿ ಆಳದಲ್ಲಿ ನೀರು ಸಿಗುತ್ತಿರುವ ಸೋಜಿಗ ನಡೆದಿದೆ.

ನಗರದ ಹೊರವಲಯದ ಕೃಷ್ಣಾವರಂ ಬಳಿಯ ಕಣಿವೆ ಪ್ರದೇಶದಲ್ಲಿ ಗುತ್ತಿಗೆದಾರರೊಬ್ಬರು ಕುತೂಹಲದಿಂದ ತೆಗೆದ ಸಣ್ಣ ಹಳ್ಳದಲ್ಲಿ ಭೂಮಿಯಿಂದ ಕೇವಲ ಒಂದು ಅಡಿ ಮಟ್ಟದಲ್ಲಿ ನೀರು ನಿಂತಿದೆ. ಸುತ್ತಮುತ್ತಲಿನ ಪ್ರದೇಶದ ಜಾನುವಾರುಗಳಿಗೆ ಮತ್ತು ಕೃಷ್ಣಮೃಗಗಳಿಗೆ ಹೊಸ ಆಸರೆಯಾಗಿರುವ ಈ ಪ್ರದೇಶ ನೀರಿನ ಚಿಲುಮೆಗೆ ಹೆಸರಾಗಿದೆ.

ಕೃಷ್ಣಾವರಂನ ಫಲಸು ಗಂಗಮ್ಮ ದೇವಾಲಯದ ಬಳಿ ಇರುವ ಸಣ್ಣ ಕಣಿವೆಯಲಕ್ಲಿ ಕಳೆದ ವಾರ ಪಿಚ್ಚಹಳ್ಳಿಯ ಗುತ್ತಿಗೆದಾರ ವಿಶ್ವನಾಥ್ ಕುತೂಹಲದಿಂದ ಜೆಸಿಬಿ ಮೂಲಕ ಮೂರು ಅಡಿ ಆಳ, ಸುಮಾರು ಎಂಟು ಅಡಿ ವ್ಯಾಸವುಳ್ಳ ಹಳ್ಳ ಕೊರೆಸಿದರು. ಮರುದಿನ ನೋಡುವಷ್ಟರಲ್ಲಿ ಆ ಹಳ್ಳದಲ್ಲಿ ನೀರು ತುಂಬಿತ್ತು.

ಈ  ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ನಾರಾಯಣಮ್ಮ ನೀರಿನ ಚಿಲುಮೆ ಕಂಡು ಚಿಕಿತರಾದರು. ಸದರಿ ಪ್ರದೇಶದಲ್ಲಿ ನೀರಿನ ಆಸರೆ ಹೆಚ್ಚಾಗಿದೆ. ಇಲ್ಲಿ ಸಿಗುವ ನೀರು ಕುಡಿಯಲು ಸಹ ಯೋಗ್ಯವಾಗಿದೆ. ತಾಲ್ಲೂಕು ಆಡಳಿತ ಮನಸ್ಸು ಮಾಡಿದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀರಿನ ಮೂಲದ ಪರಿಚಯ ಮಾಡಿಕೊಟ್ಟ ವಿಶ್ವನಾಥ್ ಹೇಳುವಂತೆ ಇಲ್ಲಿ ಸುಮಾರು ಎಂಟು ವರ್ಷಗಳ ಹಿಂದೆ ಜಿಲ್ಲಾ ಪಂಚಾಯತಿ ವತಿಯಿಂದ ಕೊಳವೆ ಬಾವಿಯನ್ನು ಕೊರೆಸಲಾಯಿತು. ಅದರಲ್ಲಿ ಕೇವಲ ನಾಲ್ಕು ಅಡಿ ಅಳದಲ್ಲಿಯೇ ನೀರು ಸಿಕ್ಕಿದೆ. ಆದರೆ ಇದುವರೆವಿಗೂ ಕೊಳವೆಬಾವಿಗೆ ಮೋಟಾರ್ ಅಳವಡಿಸಿಲ್ಲ.

ನೀರನ್ನು ಪಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸದರಿ ಕೊಳವೆ ಬಾವಿಗೆ ಸಮೀಪದ ದೇವಾಲಯ ಸಮಿತಿಯವರು ಒಂದು ಎಚ್‌ಪಿ ಮೋಟಾರ್ ಅಳವಡಿಸಿಕೊಂಡು ನೀರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.
ಸದರಿ ಕೊಳವೆಬಾವಿಯ ಕೊಳವೆಯೊಳಗೆ ಸಣ್ಣ ಕಲ್ಲು ಹಾಕಿದರೆ ಭೂಮಿ ಮಟ್ಟದಲ್ಲೇ ಇರುವ ನೀರಿನ ಶಬ್ದ ಕೇಳಿಬರುತ್ತದೆ.

ಈ ಪ್ರದೇಶಕ್ಕೆ ಜಲಮಂಡಳಿಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹೀಗೆ ಎಲ್ಲರೂ ಬಂದು ಹೋದರು. ಆದರೆ ಯಾರೂ ಇಲ್ಲಿ ಸಿಗುವ ನೀರಿನ ಸಮರ್ಪಕ ಬಳಕೆ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ತೋರಲಿಲ್ಲ ಎಂದು ಸದಸ್ಯರೊಬ್ಬರು ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.