ಕೋಲಾರ: ‘ಹಾಡುಗಾರರ ಪ್ರತಿಭೆ ಅನಾವರಣಕ್ಕಾಗಿ ಹಾಗೂ ಅನಾಥಾಶ್ರಮಗಳ ಸಹಾಯಾರ್ಥ ನಗರದಲ್ಲಿ ಸೆ.22ರಂದು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಾಯ್ಸ್ ಆಫ್ ಕೋಲಾರ ತಂಡದ ಸದಸ್ಯ ನಾಗರಾಜ್ ಬಸಪ್ಪ ತಿಳಿಸಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಟಿ.ಚನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗುತ್ತದೆ. ಕಾರ್ಯಕ್ರಮ ಸಂಜೆವರೆಗೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
‘ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಂದಲೇ ಅನಾಥಾಶ್ರಮಗಳಿಗೆ ದೈನಂದಿನ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ನೀಡಲಾಗುತ್ತದೆ. ಸಾರ್ವಜನಿಕರು ಸಹಾಯ ಮಾಡಬಹುದು’ ಎಂದು ಹೇಳಿದರು.
‘ಪ್ರತಿಭಾವಂತ ಕಲಾವಿದರು ಸ್ಟಾರ್ ಮೇಕರ್ ಎಂಬ ಆ್ಯಪ್ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. 400ಕ್ಕೂ ಹೆಚ್ಚು ಹಾಡುಗಾರರು ಹಾಡಿರುವ ವಿಡಿಯೊಗಳನ್ನು ಆ್ಯಪ್ನಲ್ಲಿ ಹಾಕಿದ್ದಾರೆ. 136ಕ್ಕೂ ಹೆಚ್ಚು ಹಾಡುಗಾರರು ನೋಂದಣಿ ಮಾಡಿಸಿದ್ದು, ಈ ಕಲಾವಿದರು ಸೆ.22ರ ಕಾರ್ಯಕ್ರಮದಲ್ಲಿ ಪ್ರತಿಭೆ ಪ್ರದರ್ಶಿಸುತ್ತಾರೆ’ ಎಂದು ತಂಡದ ಸದಸ್ಯ ಸಂಪತ್ ವಿವರಿಸಿದರು.
‘ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಕಲಾವಿದರಿಗೆ ಸಹಾಯವಾಗುತ್ತದೆ. ಮುಂದೆ ಕೋಲಾರ ಕೋಗಿಲೆ ಎಂಬ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತದೆ’ ಎಂದು ಕಲಾವಿದ ಸತ್ಯನಾರಾಯಣ ಮಾಹಿತಿ ನೀಡಿದರು.
ವಾಯ್ಸ್ ಆಫ್ ಕೋಲಾರ ತಂಡದ ಸದಸ್ಯರಾದ ಮುರಳಿ ಮೋಹನ್, ರಾಮಮೂರ್ತಿ, ಎಲ್.ಎನ್.ಬಸವರಾಜ್, ಶ್ರೀನಿವಾಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.