ಬಂಗಾರಪೇಟೆ: ಅಪಘಾತದಲ್ಲಿ ಮೃತಪಟ್ಟ ಹೆಣ್ಣು ಜಿಂಕೆಯನ್ನು ಕೆಲ ವ್ಯಕ್ತಿಗಳು ಯರಗೋಳು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಮಾಂಸವಾಗಿ ಪರಿವರ್ತಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ 25 ಕೆ.ಜಿ ಜಿಂಕೆ ಮಾಂಸ ವಶಕ್ಕೆ ಪಡೆದಿದೆ. ಆರೋಪಿಗಳು ಪರಾರಿಯಾಗಿದ್ದಾರೆ.
ಬಂಗಾರಪೇಟೆ ವಲಯದ ತೊಪ್ಪನಹಳ್ಳಿ ಶಾಖಾ ವ್ಯಾಪ್ತಿ ಕಾಮಸಮುದ್ರ ವನ್ಯಜೀವಿಧಾಮದ ಕಾಮಸಮುದ್ರ-ಕೃಷ್ಣಗಿರಿ ರಸ್ತೆಬದಿ ಬುಧವಾರ ಜಿಂಕೆ ಅಪಘಾತಕ್ಕೆ ಈಡಾಗಿತ್ತು. ಅದನ್ನು ಪಕ್ಕದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದ ಕೆಲ ವ್ಯಕ್ತಿಗಳು ಮಾಂಸವಾಗಿ ಪರಿವರ್ತಿಸುತ್ತಿದ್ದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಮಾಂಸವನ್ನು ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಮ್ಮತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಜಿಂಕೆ ಮಾಂಸವನ್ನು ಸುಟ್ಟು ವಿಲೇವಾರಿ ಮಾಡಿದರು. ಎಸಿಎಫ್ ಸುಮಂತ್, ಬಂಗಾರಪೇಟೆ ವಲಯ ಸಂರಕ್ಷಣಾಧಿಕಾರಿ ಶ್ರೀಲಕ್ಷ್ಮಿ, ಪಶುವೈದ್ಯ ಅಧಿಕಾರಿ ಡಾ.ಶಿವರಾಜ್, ಅರಣ್ಯ ಇಲಾಖೆ ಸಿಬ್ಬಂದಿ ವೇಣು, ಹಾಲಪ್ಪ, ನಾರಾಯಣಪ್ಪ, ಮಣಿ, ರಾಮಚಂದ್ರರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.