ಕೆಜಿಎಫ್: ಕಾರು ಚಾಲಕನ ಮೇಲೆ ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯ ಸಿಬ್ಬಂದಿ ಬಹಿರಂಗವಾಗಿ ಸಾಮೂಹಿಕವಾಗಿ ಹಲ್ಲೆ ನಡೆಸಿದ ಪ್ರಕರಣ ರಾಬರ್ಟಸನ್ಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ಮುಂಜಾನೆ ಆಸ್ಪತ್ರೆಗೆ ಬಂದಿದ್ದ ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸಂಪತ್ ಬೈಕನ್ನು ಖಾಸಗಿ ವ್ಯಕ್ತಿಯೊಬ್ಬರ ಕಾರಿಗೆ ಡಿಕ್ಕಿ ಹೊಡೆಸಿದರು. ಈ ಸಂಬಂಧವಾಗಿ ಕಾರು ಚಾಲಕ ಮತ್ತು ಕಾನ್ಸ್ಟೇಬಲ್ ನಡುವೆ ಮಾತಿನ ಚಕಮಕಿ ನಡೆಯಿತು.
ಕಾನ್ಸ್ಟೇಬಲ್ ಕಾರಿನ ಚಾಲಕನ ಮೇಲೆ ಹಲ್ಲೆ ಕೂಡ ನಡೆಸಿದರು. ಮಫ್ತಿಯಲ್ಲಿದ್ದರಿಂದ ಕಾನ್ಸ್ಟೇಬಲ್ ಗುರುತು ಸಿಗದ ಕಾರಣ ಕಾರಿನ ಚಾಲಕ ಸಂಪತ್ ಮೇಲೆ ಕೈ ಮಾಡಿದ. ಕೊಲೆ ಪ್ರಕರಣದ ಆರೋಪಿಗಳನ್ನು ವೈದ್ಯಕೀಯ ತಪಾಸಣೆ ನಡೆಸಲು ಚಾಂಪಿಯನ್ರೀಫ್ಸ್ ಪೊಲೀಸರು ಆಸ್ಪತ್ರೆ ಆವರಣಕ್ಕೆ ಬಂದಿದ್ದರು.
ಗಲಭೆ ನೋಡಿ ಸ್ಥಳಕ್ಕೆ ಬಂದ ಅವರುಗಳು ಕಾನ್ಸ್ಟೇಬಲ್ ಬೆಂಬಲವಾಗಿ ನಿಂತು ಥಳಿಸ ತೊಡಗಿದರು. ಸಿನಿಮೀಯ ರೀತಿ ಯಲ್ಲಿ ಪೊಲೀಸರು ನಡೆಸುತ್ತಿದ್ದ ಹಲ್ಲೆಯನ್ನು ಸಾರ್ವನಿಕರು ನಿಬ್ಬೆರಗಾಗಿ ನೋಡುತ್ತಿದ್ದರು.
ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯ ಇನ್ಸ್ಟೆಕ್ಟರ್ ಕಚೇರಿಯಲ್ಲಿ ಇರಿಸಿದರು. ಈ ವಿಷಯವಾಗಿ ಮಾಹಿತಿ ಹಾಗೂ ದೂರು ಇಲ್ಲ ಎಂದು ರಾಬರ್ಟಸನ್ಪೇಟೆ ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸಪುರ: ಉತ್ತಮ ಗುಣಮಟ್ಟದ ಕಲಿಕೆಗಾಗಿ ಶಾಲಾ ಜೋಡಣೆ ಕಾರ್ಯಕ್ರಮ ಪೂರಕವಾಗಿದೆ. ಇದನ್ನು ಎಲ್ಲ ಶಿಕ್ಷಕರೂ ಗಂಭೀರವಾಗಿ ಪರಿಗಣಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಸಿಆರ್ಪಿ ಎಚ್.ಆಂಜಪ್ಪ ಹೇಳಿದರು.
ತಾಲ್ಲೂಕಿನ ಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಜೋಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಬೆರೆತು ಚರ್ಚಿಸುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ವಿಚಾರ ವಿನಿಮಯ ಜ್ಞಾನಾರ್ಜನೆಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿ.ಎನ್.ಗೋವಿಂದರೆಡ್ಡಿ ಹಾಗೂ ವಿದ್ಯಾರ್ಥಿಗಳನ್ನು ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕ ಎಸ್.ಶಿವಮೂರ್ತಿ ಆತ್ಮೀಯವಾಗಿ ಸ್ವಾಗತಿಸಿದರು.
ಎಪಿಎಂಸಿ ಅಧ್ಯಕ್ಷೆ ಶ್ಯಾಮಲ ಗೋಪಾಲರೆಡ್ಡಿ, ಶಿಕ್ಷಕರಾದ ಹನುಮಂತಪ್ಪ, ಶ್ರೀನಾಥ್, ಭಾನುಮತಿ, ಶ್ರೀನಿವಾಸಮೂರ್ತಿ, ಲಕ್ಷ್ಮೀನಾರಾಯಣರೆಡ್ಡಿ, ರವೀಂದ್ರರೆಡ್ಡಿ, ಎಂ.ಶ್ರೀನಾಥ್, ರವಿಚಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.