ADVERTISEMENT

ಅಬ್ದುಲ್ ಕಲಾಂ ನೆನಪು ಶಾಶ್ವತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 15:54 IST
Last Updated 4 ನವೆಂಬರ್ 2020, 15:54 IST
ಕೋಲಾರದಲ್ಲಿ ಬುಧವಾರ ನಡೆದ ಅಬ್ದುಲ್ ಕಲಾಂ ಜಯಂತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕೋಲಾರದಲ್ಲಿ ಬುಧವಾರ ನಡೆದ ಅಬ್ದುಲ್ ಕಲಾಂ ಜಯಂತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.   

ಕೋಲಾರ: ‘ವಿಜ್ಞಾನ ಕೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅಬ್ದುಲ್ ಕಲಾಂರ ನೆನಪು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದೆ’ ಎಂದು ಜೆಡಿಎಸ್‌ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಅಭಿಪ್ರಾಯಪಟ್ಟರು.

ಅಬ್ದುಲ್‌ ಕಲಾಂ ಸೋಶಿಯಲ್ ವೆಲ್ಫೇರ್‌ ಚಾರಿಟಬಲ್‌ ಟ್ರಸ್ಟ್ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಬ್ದುಲ್ ಕಲಾಂ ಜಯಂತಿಯಲ್ಲಿ ಮಾತನಾಡಿ, ‘ತಮಿಳುನಾಡಿನ ಬಡ ಕುಟುಂಬದಲ್ಲಿ ಜನಿಸಿದ ಕಲಾಂ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡಿ ಜಾಗತಿಕವಾಗಿ ಗುರುತಿಸಿಕೊಂಡರು’ ಎಂದು ತಿಳಿಸಿದರು.

‘ಬಾಹ್ಯಾಕಾಶ, ಕ್ಷಿಪಣಿ, ಭೌತ ವಿಜ್ಞಾನ ಕ್ಷೇತ್ರದಲ್ಲಿ ಕಲಾಂ ಅವರು ಮಾಡಿದ ಸಂಶೋಧನೆಗಳು ಜಾಗತಿಕ ಮನ್ನಣೆ ಪಡೆದಿವೆ. ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಕಲಾಂರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಕಲಾಂ ಅವರಿಗೆ ಸಾಕಷ್ಟು ಪ್ರಶಸ್ತಿ ಬಂದಿವೆ. ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಅವರು ಮಕ್ಕಳಲ್ಲಿ ವೈಜ್ಞಾನಿಕ ಭಾವನೆ ಬೆಳೆಸಿದರು. ಆಸ್ತಿ ಅಥವಾ ಹಣ ಸಂಪಾದನೆಗೆ ಪ್ರಾಮುಖ್ಯತೆ ಕೊಡದ ಕಲಾಂ ಅವರ ಜೀವನ ಶೈಲಿ ಮತ್ತು ಸರಳ ವ್ಯಕ್ತಿತ್ವ ಇಡೀ ಜಗತ್ತಿಗೆ ಮಾದರಿ’ ಎಂದು ಬಣ್ಣಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಜಮೀರ್ ಪಾಷಾ, ಮುಸ್ಮಿಂ ಧರ್ಮ ಗುರು ಶಾರೀಕ್ ಪಾಷಾ, ಟ್ರಸ್ಟ್ ಅಧ್ಯಕ್ಷ ಸಗೀರ್ ಪಾಷಾ, ಕಾರ್ಯದರ್ಶಿ ಚಾನ್‌ಪಾಷಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.