ADVERTISEMENT

ಸಂಘದ ಕಾರ್ಯ ಚಟುವಟಿಕೆಗೆ ಶ್ಲಾಘನೆ

ಕಡಗಟ್ಟೂರು ಎಸ್‌ಎಫ್‌ಎಸಿಎಸ್‌ಗೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 11:34 IST
Last Updated 8 ಫೆಬ್ರುವರಿ 2020, 11:34 IST
ಕೋಲಾರ ತಾಲ್ಲೂಕಿನ ಜೀಚಗಂಡಹಳ್ಳಿ ಮುನಿಯಪ್ಪ ರೇಷ್ಮೆ ಹುಳು ಮನೆಗೆ ನಬಾರ್ಡ್‌ ಮತ್ತು ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿತ್ತು.
ಕೋಲಾರ ತಾಲ್ಲೂಕಿನ ಜೀಚಗಂಡಹಳ್ಳಿ ಮುನಿಯಪ್ಪ ರೇಷ್ಮೆ ಹುಳು ಮನೆಗೆ ನಬಾರ್ಡ್‌ ಮತ್ತು ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿತ್ತು.   

ಕೋಲಾರ: ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಚೇರಿಗೆ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ, ಕಾರ್ಯ ಚಟುವಟಿಕೆ ಪರಿಶೀಲಿಸಿದರು.

ಸಂಘದ ವ್ಯಾಪ್ತಿಯ ಜೀಚಗಂಡಹಳ್ಳಿ ಮುನಿಯಪ್ಪ ರೇಷ್ಮೆ ಹುಳ ಮನೆಗೆ ಹಾಗೂ ಮಹಿಳಾ ಸ್ವ ಸಹಾಯಗಳ ಸಂಘಗಳ ಪ್ರತಿನಿಧಿಗಳನ್ನು ಭೇಟಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಹಿಳಾ ಸ್ವ ಸಹಾಯ ಸಂಘಗಳ ನಿರ್ವಹಣೆ, ಸಾಲ ಮರುಪಾವತಿ, ಠೇವಣಿ ಹೂಡಿಕೆ, ಬೆಳೆ ಸಾಲ ಮರುಪಾವತಿ, ಹಣಕಾಸು ವ್ಯವಹಾರದ ಬಗ್ಗೆ ಸಂಘಗಳ ಪ್ರತಿನಿಧಿಗಳು ವಿವರಿಸಿದರು.

ADVERTISEMENT

‘ಸಂಘದ ಮೂಲಕ ಪಡೆದುಕೊಂಡಿರುವ ಸಾಲವನ್ನು ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತೆವೆ. ಹಸು ಖರೀದಿಸಿ ಹಾಲು ಉತ್ಪಾದಿಸಿ ಡೇರಿಗೆ ಸರಬರಾಜು ಮಾಡುತ್ತೆವೆ, ಇದರಿಂದ ಆರ್ಥಿಕವಾಗಿ ಲಾಭ ದೊರೆಯುತ್ತಿದ್ದು, ಪಡೆದುಕೊಂಡಿರುವ ಸಾಲವನ್ನು ಕಂತಿನ ಮೂಲಕ ಮರುಪಾವತಿ ಮಾಡಲು ಸಹಕಾರಿಯಾಗುತ್ತದೆ’ ಎಂದು ಸಂಘಗಳ ಪ್ರತಿನಿಧಿಗಳು ತಿಳಿಸಿದರು.

ನಬಾರ್ಡ್ ಬ್ಯಾಂಕಿನ ಡಿಜಿಎಂ ನಂಬೂದರಿ ಮಾತನಾಡಿ, ‘ಸಹಕಾರ ಸಂಘಗಳು ಡಿಸಿಸಿ ಬ್ಯಾಂಕಿನ ಅವಿಭಾಜ್ಯ ಅಂಗ ಇದ್ದಂತೆ. ಸಂಘಗಳು ಉತ್ತಮ ರೀತಿಯಲ್ಲಿ ಆರ್ಥಿಕ ಚಟುವಟಿಕೆ ನಡೆಸಿದಾಗ ಬ್ಯಾಂಕ್‌ ಲಾಭಗಳಿಸಲು ಸಹಕಾರಿಯಾಗುತ್ತದೆ. ರೈತರಲ್ಲಿ, ಮಹಿಳೆಯರ ಬಳಿ ಇರುವ ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಬ್ಯಾಂಕ್ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

‘ಹಣಕಾಸು ಶೈಕ್ಷಣಿಕ ವರ್ಷ ಮಾರ್ಚ್‌ ಅಗಿರುವುದರಿಂದ ಪಡೆದುಕೊಂಡಿರುವ ಸಾಲ ಕಂತನ್ನು ಸಮರ್ಪಕವಾಗಿ ಪಾವತಿ ಮಾಡಬೇಕು. ಒಂದು ವೇಳೆ ಪಾವತಿ ಮಾಡದಿದ್ದರೆ ಆ ಫಲಾನುಭವಿಯೂ ಸುಸ್ತಿಯಾಗುವ ಅವಕಾಶ ಇರುತ್ತದೆ. ಇದರಿಂದ ನೀವು ಮತ್ತೆ ಸಾಲ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಎಚ್ಚರಿಸಿದರು.

ಅಪೆಕ್ಸ್ ಬ್ಯಾಂಕಿನ ಡಿಜಿಎಂ ಮಂಗಳಾ ನಾಯಕ್ ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ ಮಾಡುತ್ತಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಹೆಸರು ಪಡೆದುಕೊಂಡಿದ್ದು, ಬಡ ಮಹಿಳೆಯರ, ರೈತರ ಸಬಲಿಕರಣಕ್ಕೆ ಶ್ರಮಿಸುತ್ತಿದ್ದು, ನಂಬಿಕೆ ಉಳಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

ಅಪೆಕ್ಸ್ ಎಜಿಎಂ ಡಿ.ಖಾನ್, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಖಲೀಂವುಲ್ಲಾ, ನಾಗೇಶ್, ಬಾಲಾಜಿ, ಸೂಪರ್‌ವೈಜರ್ ಅಮೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.