ADVERTISEMENT

ಜನಪರ ಹೋರಾಟ ಹತ್ತಿಕ್ಕುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 14:36 IST
Last Updated 11 ಫೆಬ್ರುವರಿ 2020, 14:36 IST
ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ವಿಶ್ವಪಥ ಕಲಾ ಸಂಗಮದ ಕಲಾವಿದರು ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶಿಸಿದರು.
ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ವಿಶ್ವಪಥ ಕಲಾ ಸಂಗಮದ ಕಲಾವಿದರು ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶಿಸಿದರು.   

ಕೋಲಾರ: ‘ಗಾಂಧೀಜಿಯ ತತ್ವ ಸಿದ್ಧಾಂತ ಪಾಲಿಸಿಕೊಂಡು ಬಂದಿರುವ ಸಂಸ್ಥೆಯು ಈವರೆಗೆ 166 ಹುಣ್ಣಿಮೆ ಕಾರ್ಯಕ್ರಮ ನಡೆಸಿದೆ’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಹೇಳಿದರು.

ಹುಣ್ಣಿಮೆ ಹಾಡು ಪ್ರಯುಕ್ತ ನಗರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನದಲ್ಲಿ ಮಾತನಾಡಿ, ‘ದೇಶದಲ್ಲಿ ನಿರಂತರ ಚಳವಳಿ ನಡೆಯುತ್ತಿವೆ. ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಜನ ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.

‘ಕವಿತೆ, ನಾಟಕ, ಲೇಖನ ಬರೆಯುವ ಸ್ವತಂತ್ರ ಕಿತ್ತುಕೊಳ್ಳುವುದು ಯಾವ ನೀತಿ? ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುತ್ತಿದೆ. ಜನಪರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಆದಿಮ ಸಾಂಸ್ಕೃತಿಕ ಕೇಂದ್ರವನ್ನು ಇಷ್ಟು ಚೆನ್ನಾಗಿ ಬೆಳೆಸಿರುವುದಕ್ಕೆ ಸಂತಸವಾಗುತ್ತದೆ. ದುಡಿದು ನಾವು ಮಾತ್ರ ಬದುಕುವುದಕ್ಕಿಂತ ಸಮಾಜಕ್ಕೆ ಒಳಿತು ಮಾಡಬೇಕು’ ಎಂದು ವಿಶ್ವಮಾನವ ರಾಜ್‌ಕುಮಾರ್ ಸೇವಾ ಸಮಿತಿ ಅಧ್ಯಕ್ಷ ರಾಜು ಹೇಳಿದರು.

‘ಆದಿಮ ಕೇಂದ್ರವು ನೆಲೆಗೊಂಡಿರುವ ಬೆಟ್ಟವು ಪ್ರಕೃತಿ ವಿಸ್ಮಯ ತಾಣವೆನಿಸುತ್ತದೆ. ಆದಿಮದಂತಹ ಸಂಸ್ಥೆ ಕಟ್ಟಿ ಬೆಳೆಸುವುದು ಕಷ್ಟದ ಕೆಲಸ. ಇಂತಹ ಸಂಸ್ಥೆಗಳಿಂದಲೇ ನಮ್ಮ ಜಾನಪದ, ನಾಟಕ ಉಳಿದಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಹೊಸ ಗ್ರಾಮೀಣ ಪ್ರತಿಭೆಗಳು ಅನಾವರಣಗೊಂಡಿವೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ ಅಭಿಪ್ರಾಯಪಟ್ಟರು.

ವಿಶ್ವಪಥ ಕಲಾ ಸಂಗಮದ ಕಲಾವಿದರು ಹನುಮಂತ ಹಾಲಿಗೇರ ರಚನೆಯ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶಿಸಿದರು. ರಾಜ್ಯ ಜನಪದ ಅಕಾಡೆಮಿ ಮಾಜಿ ಸದಸ್ಯ ಡಿ.ಆರ್‌.ರಾಜಪ್ಪ, ನಾಟಕ ರಚನಕಾರ ಹನುಮಂತ ಹಾಲಿಗೇರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.