ADVERTISEMENT

ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:51 IST
Last Updated 10 ಡಿಸೆಂಬರ್ 2025, 6:51 IST
ಬಂಗಾರಪೇಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಬಂಗಾರಪೇಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು   

ಬಂಗಾರಪೇಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಗೆ ಶತಮಾನದ ಸಂಭ್ರಮ ಕಾರ್ಯಕ್ರಮ ನಡೆಯಿತು.

ಈ ವೇಳೆ ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ, ಕನ್ನಡ ಭಾಷೆಯು ಅನೇಕ ವರ್ಷಗಳಿಂದ ತಮಿಳು, ತೆಲುಗು ಮತ್ತು ಮಲಯಾಳಂನಂತಹ ದ್ರಾವಿಡ ಭಾಷೆಗಳೊಂದಿಗೆ ಪರಸ್ಪರ ಶಬ್ದ ಹಾಗೂ ವ್ಯಾಕರಣ ವಿನಿಮಯ ಮಾಡಿಕೊಂಡಿದೆ. ಇದು ಭಾಷೆಯ ಸಂಪತ್ತು ವೃದ್ಧಿಯಾಗಲು ಕಾರಣವಾಗಿದೆಯೇ ಹೊರತು, ಧಕ್ಕೆಯಲ್ಲ ಎಂದು ತಿಳಿಸಿದರು.

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಭಾಷೆಯನ್ನು ಉಳಿಸಿಕೊಂಡು ಹೋಗುವುದು ಕನ್ನಡಿಗರ ಮೇಲಿದೆ. ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೆ ವರ್ಷಪೂರ ಆಚರಣೆ ಮಾಡುವ ಮೂಲಕ ಭಾಷೆ ಜೀವಂತಗೊಳಿಸಬೇಕು ಎಂದರು.

ಬೆಂಗಳೂರಿನಲ್ಲಿ 2.45 ಕೋಟಿ ಅನ್ಯ ಭಾಷಿಗಗರಿದ್ದಾರೆ. ಕೋಲಾರದಲ್ಲಿ 25 ಸಾವಿರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅವರಿಗೆ ಕನ್ನಡ ಬರುವುದಿಲ್ಲ. ವಲಸಿಗರಿಂದಲೇ ಭಾಷೆಯು ಪ್ರಭಾವ ಕಡಿಮೆಯಾಗುತ್ತಿದೆ. ಕನ್ನಡ ಭಾಷೆ ಉಳಿಯಬೇಕಾದರೆ ವರ್ಷಪೂರ್ತಿ ಭಾಷೆಯನ್ನು ಬಳಸಬೇಕು ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷ ಆರ್.ಅಶ್ವಥ್ ಮಾತನಾಡಿ, ಕನ್ನಡ ಭಾಷೆಯ ಬಳಕೆ ಕೇವಲ ಮನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರುವುದರಿಂದ ಭಾಷೆಯ ಅಸ್ತಿತ್ವ ಕ್ರಮೇಣ ಕ್ಷೀಣಿಸುತ್ತಿದೆ. ವಲಸಿಗರಿಂದ ಸಂಖ್ಯೆ ಹೆಚ್ಚಾದಂತೆ ಎಲ್ಲೆಡೆ ಇಂಗ್ಲಿಷ್, ಹಿಂದಿ ಸಂವಹನ ಪ್ರಬಲವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕುವೆಂಪು ರಚನೆ ಮಾಡಿರುವ ನಾಡಗೀತೆಗೆ ನೂರು ವರ್ಷ ಆಗಿರುವುದರಿಂದ ಪ್ರತಿ ಶಾಲೆ, ಕಾಲೇಜಿನಲ್ಲಿ ನಾಡಗೀತೆಯನ್ನು ಹಾಡುವುದರ ಮೂಲಕ ಅದರ ಅರ್ಥವನ್ನು ಗಟ್ಟಿಗೊಳಿಸಬೇಕೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಶಕುಂತಲ, ಪ್ರಾಧ್ಯಾಪಕ ವೇಣುಗೋಪಾಲ್, ಮಾಜಿ ನೌಕರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ರಾಮಪ್ರಸಾದ್, ಕೆ.ಜಿ.ಮಂಜುನಾಥ್, ಎನ್.ಶ್ರೀನಾಥ್, ಸತೀಶ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.