ಕೆಜಿಎಫ್: ಸಾಲ ಪಡೆಯಲು ಗ್ರಾಹಕರು ಬ್ಯಾಂಕ್ನಲ್ಲಿ ಗಿರಿವಿ ಇಟ್ಟಿದ್ದ ಒಡವೆಗಳನ್ನು ಸಿಬ್ಬಂದಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಬ್ಯಾಂಕ್ನಿಂದ ಮೋಸವಾಗುತ್ತಿದೆ ಎಂದು ಆರೋಪಿಸಿ ಗ್ರಾಹಕರು ಗುರುವಾರ ಇಲ್ಲಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ಬೀಗ ಹಾಕಿ ಪ್ರತಿಭಟಿಸಿದರು.
ಗ್ರಾಹಕರಿಗೆ ಚಿನ್ನದ ಮೌಲ್ಯದ ಹಣ ವಾಪಸ್ ನೀಡುವ ಬಗ್ಗೆ ತಕರಾರು ಇತ್ತು. ಸಿಬ್ಬಂದಿಯೇ ಕಳ್ಳತನ ಮಾಡಿರುವುದರಿಂದ ಬ್ಯಾಂಕ್ ಜವಾಬ್ದಾರಿ ಹೊರಬೇಕು. ಅಕ್ಟೋಬರ್ನಿಂದ ಇಲ್ಲಿಯವರೆವಗೂ ಬಡ್ಡಿ ಹಾಕಬಾರದು. ಇವತ್ತಿನ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಹಕರು ಸಾಲ ಪಡೆಯಲು ಗಿರವಿ ಇಟ್ಟಿದ್ದ ಚಿನ್ನವನ್ನುಬ್ಯಾಂಕ್ ಸಿಬ್ಬಂದಿ ದುರುಪಯೋಗ ಪಡಿಸಿಕೊಂಡ ವಿಷಯ ಬ್ಯಾಂಕ್ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ. ನಾಲ್ವರು ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಸಂಸದ ಎಸ್.ಮುನಿಸ್ವಾಮಿ ಮತ್ತು ಮಾಜಿ ಶಾಸಕ ಎಸ್.ರಾಜೇಂದ್ರನ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಳೆದು ಹೋದ ಗ್ರಾಹಕರ ಚಿನ್ನಕ್ಕೆ ಇವತ್ತಿನ ಬೆಲೆ ಕೊಡಲು ಬ್ಯಾಂಕ್ ಸಿಬ್ಬಂದಿ ಸಮ್ಮತಿಸಿದರು. ಸೋಮವಾರದ ನಂತರ ಸಾಲಗಾರರ ಖಾತೆಗಳಿಗೆ ಹಣ ಪಾವತಿಸುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ ನಂತರ ಗ್ರಾಹಕರು ಪ್ರತಿಭಟನೆ ವಾಪಸ್ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.